ರೈತ ಮುನಿಯಪ್ಪ ಕುಟುಂಬ ಆರೋಪ
ಕೋಲಾರ: ಜಮೀನು ಪೋಡಿ ದುರಸ್ತಿ ಹೆಸರಿನಲ್ಲಿ ಸರ್ವೇ ಮಾಡಿ ನಮ್ಮಿಂದ ಬೇಸಾಯ ಭೂಮಿ ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಜಮೀನು ಮಾಲೀಕರಾದ ರತ್ನಮ್ಮ ಮುನಿಯಪ್ಪ ದೂರಿದರು.
ತಾಲೂಕಿನ ವಕ್ಕಲೇರಿ ಹೋಬಳಿ ಸ್ವಾಮಿಗಳ ಗೊಲ್ಲಹಳ್ಳಿ ಗ್ರಾಮದ ಸರ್ವೇ ನಂ. 75/2 ರಲ್ಲಿ 1ಎಕರೆ 8ಗುಂಟೆ ಜಮೀನು ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಜಮೀನು ಸೇರಿದಂತೆ ಸರ್ವೇ ನಂ 76, 77, 78 ಜಮೀನುಗಳನ್ನು ಕಬಳಿಸಲು ಕೆಲವು ಕಿಡಿಗೇಡಿಗಳು ಮುಂದಾಗಿದ್ದು, ತಹಸೀಲ್ದಾರ್ ಸಹ ಅವರಿಗೆ ಸಾಥ್ ನೀಡಿದ್ದಾರೆ ಎಂದು ಆರೋಪಿಸಿದರು.
ಕಾರಿಡಾರ್ ಕಾಮಗಾರಿಗಾಗಿ ನಮ್ಮ ಜಮೀನನ್ನು ಕಳೆದುಕೊಂಡು ಬಂದ ಹಣದಿಂದ ಕೋಡಿ ನಗರದ ಕಠಾರಿ ಪಾಳ್ಯ ನಿವಾಸಿ ಸಿರಾಜ್ ಎಂಬುವರ ಬಳಿ ಲಕ್ಷ್ಮಿ ಸಾಗರ ಗ್ರಾಮದ ಸರ್ವೇ ನಂ 75/2 ಭೂಮಿಯನ್ನು ಕೊಂಡುಕೊಂಡಿದ್ದೇನೆ. ಕೆಟ್ಟ ಸ್ಥಿತಿಯಲ್ಲಿದ್ದ ಭೂಮಿಯನ್ನು ಸರಿ ಮಾಡಿ ಕೃಷಿ ಭೂಮಿಯಾಗಿ ಪರಿವರ್ತಿಸಿದ್ದು, ಟ್ರಾನ್ಸ್ ಫಾರ್ಮರ್, ಕೃಷಿ ಹೊಂಡ ನಿರ್ಮಿಸಿ ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈಗ ಕೆಲವು ಕಿಡಿಗೇಡಿಗಳಿಂದ ಜಮೀನು ಪೋಡಿ ಹೆಸರಿನಲ್ಲಿ ಸರ್ವೇ ಮಾಡಿ ಭೂಮಿ ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ.
ತಹಸೀಲ್ದಾರ್ ಇದರ ಬಗ್ಗೆ ವಿಚಾರ ಮಾಡದೆ ಸರ್ವೇ ಮಾಡಲು ಮುಂದಾಗಿದ್ದಾರೆ. ಜಮೀನಿಗೆ ಸೂಚನೆ ಪತ್ರ ಸಹ ನೀಡಿದ್ದಾರೆ. ಕುಲಂಕಷವಾಗಿ ವಿಚಾರ ಮಾಡಿ ಭೂಮಿಯನ್ನು ರಕ್ಷಿಸಿ ನ್ಯಾಯ ಕೊಡಿಸಬೇಕು. ಇಲ್ಲದಿದ್ದಲ್ಲಿ ಕುಟುಂಬ ಸಮೇತ ವಿಷ ಕುಡಿದು ನಾವು ಇದೆ ಭೂಮಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಅಳಲು ತೋಡಿಕೊಳಡರು.