ಕಾರವಾರ: ಸಂಸದ ಅನಂತಕುಮಾರ ಹೆಗಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಡಿದ ಪದಬಳಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ಸಭ್ಯತೆ ಹಾಗೂ ಸಂಸ್ಕೃತಿ ವಿಷಯದಲ್ಲಿ ತನ್ನೊಂದಿಗೆ ಮುಖಾಮುಖಿ ಚರ್ಚೆಗೆ ಬರಲಿ ಎಂದು ಮುಖ್ಯಮಂತ್ರಿಯವರಿಗೆ ಸವಾಲೆಸೆದಿದ್ದಾರೆ. ಶಿರಸಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಾನಾಡಿರುವ ಮಾತನ್ನು ತಮ್ಮ ಪಕ್ಷದ ನಾಯಕರು ಸಮರ್ಥಿಸದಿರುವುದು ಸ್ವಾಭಾವಿಕ, ಅದು ತನ್ನ ವೈಯಕ್ತಿಕ ಹೇಳಿಕೆ ಎಂದರು. ಸಭ್ಯತೆ ವಿಷಯದಲ್ಲಿ ಸಿದ್ದರಾಮಯ್ಯ ತನ್ನೊಂದಿಗೆ ಸಾರ್ವಜನಿಕ ಚರ್ಚೆಯಲ್ಲಿ ಭಾಗಿಯಾಬೇಕು ಮತ್ತು ಜನ ಅದನ್ನು ನೋಡಬೇಕು, ಸಭ್ಯತೆಯಿಂದ ಅವರು ಮಾತಾಡಿದ್ದು ಯಾವಾಗ? ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ, ದೇವಸ್ಥಾನಗಳು ಮತ್ತು ಹಿಂದೂತ್ವದ ಬಗ್ಗೆ ಅವರು ಅಸಭ್ಯವಾಗಿ ಮಾತಾಡಿದ್ದಾರೆ. ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿಯವರ ಬಗ್ಗೆ ಮಾತಾಡುವಾಗ ಸಭ್ಯತೆ ಮತ್ತು ಸಂಸ್ಕೃತಿಯ ಎಲ್ಲೆ ಮೀರಿ ಮಾತಾಡಿದ್ದಾರೆ ಎಂದು ಅನಂತಕುಮಾರ ಹೆಗಡೆ ಹೇಳಿದರು.