ಪ್ರತಿನಿಧಿ ವರದಿ ಸೋಮವಾರಪೇಟೆ
ಪುನರ್ವಸು, ಪುಷ್ಯ ಮಳೆಯ ಆರ್ಭಟಕ್ಕೆ ಎಲ್ಲೆಡೆ ಕೆರೆಕಟ್ಟೆಗಳು, ನದಿ ತೊರೆಗಳು, ಹೊಳೆಗಳು ತುಂಬಿ ಹರಿಯುತ್ತಿದ್ದು, ಅಲ್ಲಲ್ಲಿ ಜಲದ ಬುಗ್ಗೆ ಏಳುತ್ತಿದೆ.
ಈ ಹಿಂದೆ ಬರಿದಾಗುವ ಹಂತದಲ್ಲಿದ್ದ ಆನೆಕೆರೆ ಹಾಗೂ ಯಡೂರು ದೇವರ ಕೆರೆಯನ್ನು ದಾನಿ ಹರಪಳ್ಳಿ ರವೀಂದ್ರ ಅವರು ಹೂಳೆತ್ತಿಸಿದ ನಂತರ ಕೆರೆಗಳಲ್ಲಿ ಬೇಸಿಗೆಯಲ್ಲೂ ನೀರಿನ ಸಂಗ್ರಹವಿದ್ದು, ಮಳೆಗಾಲದಲ್ಲಿ ತುಂಬುತ್ತಿವೆ. ಪ್ರಸಕ್ತ ವರ್ಷ ಪುನರ್ವಸು ಹಾಗೂ ಪುಷ್ಯ ಮಳೆಗಳು ನಿರೀಕ್ಷೆಗೂ ಮೀರಿ ಸುರಿದ ಹಿನ್ನೆಲೆ ವಾಡಿಕೆಗೂ ಮುನ್ನವೇ ಪಟ್ಟಣದ ಆನೆಕೆರೆ, ಯಡೂರು ದೇವರ ಕೆರೆ, ಚೌಡ್ಲು ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ.
ಈ ಮೂರೂ ಕೆರೆಗಳ ಏರಿಗಳು ರಸ್ತೆಗಳಾಗಿವೆ. ಯಡೂರು ಮತ್ತು ಆನೆಕೆರೆಯ ಏರಿಗಳು ರಾಜ್ಯ ಹೆದ್ದಾರಿಯಾಗಿದ್ದರೆ, ಚೌಡ್ಲು ಗ್ರಾಮದ ಚೌಡ್ಲಯ್ಯ-ಮೂಡ್ಲಯ್ಯ ದೇವಾಲಯದ ಬಳಿಯಿರುವ ಕೆರೆಯ ಏರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಈ ಮೂರೂ ಕೆರೆಗಳು ತುಂಬಿದ್ದು, ರಸ್ತೆಯ ಮೇಲೆ ನೀರು ಹರಿಯುತ್ತಿರುವುದು ವಿಶೇಷವಾಗಿದೆ.
ಚಿತ್ರ: ಯಡೂರು ದೇವರ ಕೆರೆ
ಚಿತ್ರ : ಪಟ್ಟಣದ ಆನೆಕೆರೆ
ಚಿತ್ರ: ಚೌಡ್ಲು ಕೆರೆ