ಕೊಟ್ಟಿಗೆಹಾರ: ಅತ್ತಿಗೆರೆ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಹಾವುಗಳ ಆವಾಸಸ್ಥಾನವಾಗಿದೆ.
ಕಳೆದ ಎಂಟು ದಿನಗಳ ಹಿಂದೆ ನಾಗರಹಾವೊಂದು ಅಂಗನವಾಡಿ ಕೇಂದ್ರದಲ್ಲಿ ಅವಿತು ಕುಳಿತಿದ್ದು , ಉರಗ ಪ್ರೇಮಿ ಆರಿಫ್ ಹಾವನ್ನು ಹಿಡಿಯಲು ಬಂದಾಗ ಹಾವು ಪತ್ತೆಯಾಗಿಲ್ಲ. ಕಟ್ಟಡ ಕುಸಿಯುವ ಹಂತ ತಲುಪಿದ್ದು, ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂದೇಟು ಹಾಕಿದ್ದಾರೆ. ಅನೇಕ ಬಾರಿ ಅಂಗನವಾಡಿ ದುಸ್ಥಿತಿಯ ಬಗ್ಗೆ ಸ್ಥಳೀಯ ಆಡಳಿತದ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಗ್ರಾಮಸ್ಥ ಶಶಾಂಕ್ ಮಾತನಾಡಿ, ಅಂಗನವಾಡಿ ಕೇಂದ್ರದ ಮೇಲ್ಛಾವಣಿಯು ಶಿಥಿಲಗೊಂಡಿದ್ದು, .ಕಟ್ಟಡ ಬಹಳ ಹಳೆಯದಾಗಿದ್ದು ಗೋಡೆಗಳು ಬಿರುಕು ಬಿಟ್ಟಿವೆ.ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಕಟ್ಟಡ ದುರಸ್ತಿಗೆ ಮುಂದಾಗಬೇಕು ಎಂದರು.
ಅಂಗನವಾಡಿ ಕಾರ್ಯಕರ್ತೆ ಅರ್ಚನಾ ಮಾತನಾಡಿ, ಕಟ್ಟಡದಲ್ಲಿ ಮೇಲ್ಛಾವಣಿ ಹಾನಿಯಿಂದ ನೀರು ಸೋರುತ್ತಿದೆ. ಹಳೆ ಕಟ್ಟಡ ಶಿಥಿಲವಾಗಿದೆ. ಕೆಲವು ದಿನಗಳ ಹಿಂದೆ ನಾಗರಹಾವು ಕಟ್ಟಡದ ಮೇಲ್ಛಾವಣಿಯಲ್ಲಿ ಹರಿದಾಡುತ್ತಿದ್ದು ಭಯದ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ಮಕ್ಕಳು,ಪೋಷಕರು ಆತಂಕ ಗೊಂಡಿದ್ದಾರೆ. ಆದರೆ ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಶಿಥಿಲವಾದ ಅಂಗನವಾಡಿ ಕೇಂದ್ರವನ್ನು ದುರಸ್ತಿಗೊಳಿಸಬೇಕೆಂದು ಅವರು ಒತ್ತಾಯಿಸಿದರು.
ಸಮಾಜ ಸೇವಕ ಸಂಜಯ್ ಗೌಡ ಮಾತನಾಡಿ, ಅಂಗನವಾಡಿ ಸುತ್ತಮುತ್ತ ಪೊದೆಗಳು ಇರುವುದರಿಂದ ಹಾವುಗಳ ಕಾಟವೂ ಹೆಚ್ಚಾಗಿದೆ. ಮಣ್ಣಿನ ಹಳೆಗೋಡೆ ಇರುವುದರಿಂದ ಕಟ್ಟಡ ಗಟ್ಟಿಯಿಲ್ಲ. ಮಕ್ಕಳ ಸುರಕ್ಷತೆಗಾಗಿ ಹೊಸ ಕಟ್ಟಡ ನಿರ್ಮಿಸಬೇಕು. ಸರ್ಕಾರ ಈ ಬಗ್ಗೆ ಪರಿಶೀಲಿಸಿ ಹೊಸ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದರು.