ಬೆಂಗಳೂರು: ಸಾಲು ಸಾಲು ಹಗರಣಗಳ ಆರೋಪದಿಂದ ಹೈರಾಣಾಗಿರುವ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಶಾಕ್ ಎದುರಾಗಿದೆ. ಮುಡಾ ಬದಲಿ ನಿವೇಶನ ಹಂಚಿಕೆ ಕೇಸ್ ತನಿಖೆ ಹಂತದಲ್ಲಿರುವ ಬೆನ್ನಲ್ಲೇ ಸಿದ್ದರಾಮಯ್ಯಗೆ ಮತ್ತೊಂದು ಆಘಾತ ಎದುರಾಗಿದೆ. ಅರ್ಕಾವತಿ ಬಡಾವಣೆಯ ನಿವೇಶನದಾರರು ಕೂಡ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ .ಅರ್ಕಾವತಿ ಲೇಔಟ್ನಲ್ಲಿ ಸೈಟ್ ಪಡೆದಿರುವ ಶಿವಲಿಂಗಪ್ಪ, ವೆಂಕಟಕೃಷ್ಣಪ್ಪ, ರಾಮಚಂದ್ರಯ್ಯ ಎಂಬುವವರು ಸಿಎಂ ಸಿದ್ದರಾಮಯ್ಯ ಹಾಗೂ ಬಿಡಿಎ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸಿಎಂ ಹಾಗೂ ಬಿಡಿಎ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ಅರ್ಕಾವತಿ ಲೇಔಟ್ನಲ್ಲಿ ಹಂಚಿಕೆಯಾಗಿದ್ದ ಸೈಟ್ಗಳನ್ನು ಭೂಗಳ್ಳರು ದೋಚುತ್ತಿದ್ದಾರೆ. ಇವರ ಅಧಿಕಾರ ದುರ್ಬಳಕೆಯಿಂದಾಗಿ ಸೈಟುದಾರರಿಗೆ ಸಮಸ್ಯೆಯಾಗುತ್ತಿದೆ ಎಂದು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಥಣಿಸಂದ್ರ, ಸಂಪಿಗೆಹಳ್ಳಿ, ಜಕ್ಕೂರು, ಕೆ.ನಾರಾಯಣಪುರ ಸೇರಿದಂತೆ ಒಟ್ಟು 16 ಹಳ್ಳಿಗಳಲ್ಲಿನ 800 ಎಕರೆ ಜಮೀನನ್ನು ಸರ್ಕಾರ ರೈತರಿಂದ ಖರೀದಿಸಿತ್ತು. ಇದನ್ನು ಬಿಡಿಎ ಸೈಟ್ಗಳಾಗಿ ಪರಿವರ್ತಿಸಲಾಗಿದೆ. ಇದಕ್ಕೆ ಹೊಸದಾಗಿ ಅರ್ಕಾವತಿ ಲೇಔಟ್ ಎಂದೂ ಹೆಸರಿಡಲಾಗಿತ್ತು. ಬಿಡಿಎ ಹಲವು ವರ್ಷಗಳ ಹಿಂದೆ ಈ ಲೇಔಟ್ನಲ್ಲಿ ಅರ್ಜಿ ಕರೆದಿತ್ತು. ಸುಮಾರು ಹನ್ನೆರಡು ಸಾವಿರ ಫಲಾನುಭವಿಗಳೆಂದು ಗುರುತಿಸಿ, ಖರೀದಿಸಿದ್ದ ಜಮೀನಿಗೆ ರೈತರಿಗೆ ಪರಿಹಾರದ ಹಣ ಕೂಡ ನೀಡಲಾಗಿತ್ತು ಎನ್ನಲಾಗಿದೆ. 2014ರಲ್ಲಿ ಅಧಿಕಾರದಲ್ಲಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಅರ್ಕಾವತಿ ಲೇಔಟ್ನ ಸೈಟ್ಗಳನ್ನು ವಾಪಸ್ ಪಡೆದಿತ್ತು. ಹಾಗಾಗಿ ಈ ಹಿಂದೆ ಅಲ್ಲಿ ಸೈಟ್ ಖರೀದಿಸಿದ್ದ ಜನರಿಗೆ ಒಳಗೆ ಪ್ರವೇಶ ಕೂಡ ನೀಡುತ್ತಿಲ್ಲ. ಹಿಂಪಡೆದಿದ್ದ ಜಾಗವನ್ನು ರೈತರಿಗೂ ವಾಪಸ್ ಕೊಟ್ಟಿಲ್ಲ. ಈ ಬಗ್ಗೆ ಕೇಳಿದರೆ ಅಧಿಕಾರಿಗಳು ಸಬೂಬು ಕೊಡುತ್ತಿದ್ದಾರೆ ಎಂದು ಮಾಲೀಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.