ಶಿವಮೊಗ್ಗ(ಸೆ.24): ಆಯನೂರು ಮಂಜುನಾಥ್ ಬಳಿಕ ಜೆಡಿಎಸ್ನ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆ ಖಚಿತವಾಗಿದ್ದು, ಮುಹೂರ್ತವೂ ಫಿಕ್ಸ್ ಆಗಿದೆ. ವಿಧಾನಸಭಾ ಚುನಾವಣೆ ಬಳಿಕ ಜಿಲ್ಲಾ ಜೆಡಿಎಸ್ನ ಒಂದೊಂದೇ ವಿಕೆಟ್ ಪತನಗೊಳ್ಳುತ್ತಿದ್ದು, ಈಗ ನಾಯಕನ ವಿಕೆಟ್ ಪತನಗೊಳ್ಳುವ ಕಾಲ ಸನಿಹವಾಗಿದೆ. ಎಂ.ಶ್ರೀಕಾಂತ್ ಈ ಸಂಬಂಧ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೆ.26ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ಸುಮಾರು 20 ವರ್ಷದಿಂದ ಜಿಲ್ಲಾ ಜೆಡಿಎಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರು ನನ್ನನ್ನು ಮಗನಂತೆ ನೋಡಿಕೊಂಡಿದ್ದಾರೆ. ಎಲ್ಲ ಜವಾಬ್ದಾರಿ ಕೊಟ್ಟಿದ್ದಾರೆ. ಆದರೆ, ನಾವು ಎಷ್ಟೇ ಶ್ರಮ ಹಾಕಿದರೂ ಜನ ಪಕ್ಷಕ್ಕೆ ಬೆಂಬಲ ನೀಡುತ್ತಿಲ್ಲ. ಹೀಗಾಗಿ ಶಿವಮೊಗ್ಗದಲ್ಲಿ ಪಕ್ಷವನ್ನು ಬಲಪಡಿಸುವುದು ಕಷ್ಟವಾಗುತ್ತಿದೆ. ನಮ್ಮ ರಾಜಕೀಯ ಬದಲಾವಣೆ ಬಯಸಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದೇನೆ. ಈ ಹಿಂದೆ ಪಾಲಿಕೆಯಲ್ಲಿ, ತಾಪಂ, ಜಿಪಂ, ಎಂಪಿ ಎಲೆಕ್ಷನ್ನಲ್ಲೂ ಕಾಂಗ್ರೆಸ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಂದಿದ್ದೇವೆ ಎಂದು ಮಾಹಿತಿ ನೀಡಿದರು.