ಹಾಸನ: ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ರೈತ ಕಾರ್ಮಿಕ ಬಲಿಯಾಗಿದ್ದಾನೆ. ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸ್ ಬರುವ ವೇಳೆ ಕಾಡಾನೆ ದಾಳಿ ಮಾಡಲು ಮುಂದಾಗಿದೆ. ಆಗ, ಕಾರ್ಮಿಕ ಪಕ್ಕದಲ್ಲಿದ್ದ ಮರವನ್ನೇರಿ ಕುಳಿತರೂ ಬಿಡದೇ ಆತನನ್ನು ಮರದಿಂದ ಕೆಳಗೆ ಬೀಳಿಸಿ ಹೊಟ್ಟೆಯ ಮೇಲೆ ಕಾಲಿಟ್ಟು ಸಾಯಿಸಿ ಹೋಗಿದೆ.
ಕಾಫಿ ತೋಟಕ್ಕೆ ತೆರಳಿದ್ದ ಕಾರ್ಮಿಕ ವಸಂತ್ (45) ಕಾಡಾನೆ ದಾಳಿಗೆ ಬಲಿಯಾದ ವ್ಯಕ್ತಿಯಾಗಿದ್ದಾನೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ಘಟನೆ ನಡೆದಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವಸಂತ್, ಕೆಲಸ ಮುಗಿಸಿ ವಾಪಸ್ ಮನೆಗೆ ಬರುವ ವೇಳೆ ಕಾಡಾನೆ ದಾಳಿ ಮಾಡಿದೆ. ಈ ವೇಳೆ ಮರವೇರಿ ಕುಳಿತ ಕಾರ್ಮಿಕ ವಸಂತ್ ಸಹಾಯಕ್ಕೆ ಕೂಗಿಕೊಂಡಿದ್ದಾನೆ. ಆಗ, ಸ್ಥಳೀಯರು ಆನೆ ಓಡಿಸಲು ಪ್ರಯತ್ನ ಮಾಡಿದರೂ ಒಂಟಿ ಸಲಗ ಕ್ಯಾರೇ ಎಂದಿಲ್ಲ.
ಕೂಡಲೇ ಜಿಲ್ಲೆಯ ಆನೆ ಕಾರ್ಯಪಡೆ ತಂಡಕ್ಕೆ ಸ್ಥಳೀಯರು ಕರೆ ಮಾಡಿ ಆನೆಯಿಂದ ಕಾರ್ಮಿಕನನ್ನು ರಕ್ಷಣೆ ಮಾಡುವಂತೆ ಗೋಗರೆದಿದ್ದಾರೆ. ಆದರೆ, ಬಲಿಷ್ಠ ಆನೆಯ ಅಟ್ಟಹಾಸ ಹೆಚ್ಚಾಗಿತ್ತು. ಇತ್ತ ಆನೆ ಕಾರ್ಯಪಡೆಯ ಅರಣ್ಯ ಇಲಾಖೆ ಸಿಬ್ಬಂದಿಯೂ ಬರಲಿಲ್ಲ. ಸಣ್ಣ ಮರವನ್ನೇರಿ ಕುಳಿತ ಕಾರ್ಮಿಕ ಜೀವ ರಕ್ಷಣೆಗೆ ಬೇಡಿಕೊಳ್ಳುತ್ತಿದ್ದನು. ಜೊತೆಗೆ, ಸ್ಥಳೀಯರು ಆನೆಯನ್ನು ಅಲ್ಲಿಂದ ಓಡಿಸಲು ಮಾಡಿದ ಪ್ರಯತ್ನಗಳೆಲ್ಲವೂ ತನ್ನ ಮೇಲೆ ದಾಳಿಗೆ ಬರುತ್ತಾರೆಂದು ಆನೆ ಮತ್ತಷ್ಟು ಸಿಟ್ಟಿಗೇಳಲು ಕಾರಣವಾಗಿದೆ.
ಮರವನ್ನೇರಿ ಕುಳಿತ ಕಾರ್ಮಿಕನನ್ನು ಕೊಂದೇ ಕಾಲು ಕೀಳುವುದಾಗಿ ಹಠವಿಡಿದಂತೆ ಕಾಣುತ್ತಿದ್ದ ಮದಗಜ ಮರವನ್ನು ಅಲುಗಾಡಿಸಿದೆ. ಇನ್ನು ಮರ ಬೀಳುವ ಮಟ್ಟಕ್ಕೆ ಅಲುಗಾಡಿಸಿದ್ದರಿಂದ ಮರದ ಮೇಲಿದ್ದ ಕಾರ್ಮಿಕ ಧೊಪ್ಪನೆ ನೆಲಕ್ಕೆ ಬಿದ್ದಿದ್ದಾನೆ, ಕ್ಷಣ ಮಾತ್ರದಲ್ಲಿ ಆತನ ಮೇಲೆ ದಾಳಿ ಮಾಡಿದ ಆನೆ, ಹೊಟ್ಟೆಯ ಮೇಲೆ ಕಾಲಿಟ್ಟು ತುಳಿದು ಸಾಯಿಸಿದೆ. ನಂತರ, ಅರಣ್ಯ ಇಲಾಖೆ ಸಿಬ್ಬಂದಿ ಬರುವ ವೇಳೆಗಾಗಲೇ ಅಲ್ಲಿಂದ ಪರಾರಿ ಆಗಿದೆ. ಇನ್ನು ಗ್ರಾಮಸ್ಥರು ಬಂದು ಆತನನ್ನು ರಕ್ಷಣೆ ಮಾಡಬೇಕೆನ್ನುವಷ್ಟರಲ್ಲಿ ಕಾರ್ಮಿಕ ವಸಂತನ ಪ್ರಾಣಪಕ್ಷಿ ಹಾರಿ ಹೋಗಿತ್ತು.