ನರಭಕ್ಷಕ ವ್ಯಾಘ್ರನ ದಾಳಿಗೆ ಮತ್ತೊಬ್ಬ ದನಗಾಹಿ ಮಹಿಳೆ ಬಲಿಯಾಗಿರುವ ಘಟನೆ ತಾಲೂಕಿನ ಬಳ್ಳೂರುಹುಂಡಿ ಗ್ರಾಮದಲ್ಲಿ ಜರುಗಿದೆ. ಬಳ್ಳೂರುಹುಂಡಿ ಗ್ರಾಮದ ವೆಂಕಟಯ್ಯ ಎಂಬವರ ಪತ್ನಿ ರತ್ನಮ್ಮ (50) ಹುಲಿ ದಾಳಿಗೆ ಬಲಿಯಾದವರು. ಕಳೆದ ಒಂದು ತಿಂಗಳ ಹಿಂದೆಯಷ್ಟೆ ಮಹದೇವ ನಗರದ ವೀರಭದ್ರಭೋವಿ ಎಂಬ ದನಗಾಹಿ ಮೇಲೆ ದಾಳಿ ನಡೆಸಿತ್ತು. ಅಲ್ಲದೆ, 2 ದಿನದ ಹಿಂದೆಯಷ್ಟೆ ಮಲ್ಕುಂಡಿ ಸಮೀಪ ಒಂದು ಎತ್ತನ್ನು ವ್ಯಾಘ್ರ ಬಲಿಪಡೆದಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಬಲಿ ಪಡೆದಿರುವುದು ಈ ಭಾಗದಲ್ಲಿ ಆತಂಕ ಸೃಷ್ಠಿಗೆ ಕಾರಣವಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಪ್ರದೇಶದಲ್ಲಿ ತಮ್ಮ ಜಮೀನಿನಲ್ಲಿ ಶುಕ್ರವಾರ ರತ್ನಮ್ಮ ಜಾನುವಾರುಗಳನ್ನು ಮೇಯಿಸುತ್ತಿದ್ದರು. ಮಧ್ಯಾಹ್ನ 3.30ರ ಸಮಯದಲ್ಲಿ ಹುಲಿ ರತ್ನಮ್ಮ ಅವರ ಮೇಲೆ ಏಕಾಏಕಿ ದಾಳಿ ನಡೆಸಿ, ಸುಮಾರು 1 ಕಿ.ಮೀ. ಕಾಡಿನೊಳಕ್ಕೆ ಎಳೆದೊಯ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಹೆಡಿಯಾಲ ಅರಣ್ಯ ಇಲಾಖೆಯ ಆರ್ಎಫ್ಓ ನಾರಾಯಣ ಮತ್ತು ಸಿಬ್ಬಂದಿ ಭೇಟಿ ನೀಡಿ ಸುಮಾರು ಒಂದು ಗಂಟೆ ಹುಡುಕಾಟದ ನಂತರ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.
ಕಾಲ್ಕಿತ್ತ ಅಧಿಕಾರಿಗಳು!
ಇನ್ನು, ಘಟನೆ ಬೆನ್ನಲ್ಲೇ ರೊಚ್ಚಿಗೆದ್ದ ಮಹದೇವನಗರ, ಹೆಡಿಯಾಲ, ಬಳ್ಳೂರಹುಂಡಿ, ಒಡೆಯನಪುರ ಗ್ರಾಮಸ್ಥರ ದಂಡು ನೆರೆದು ಹೆಡಿಯಾಲ ಅರಣ್ಯ ಇಲಾಖೆ ಕಚೇರಿಯತ್ತ ಧಾವಿಸಿದೆ. ಈ ವೇಳೆ ಜನಾಕ್ರೋಶಕ್ಕೆ ಹೆದರಿದ ಅಧಿಕಾರಿಗಳು ಕಚೇರಿಯಿಂದಲೇ ಕಾಲ್ಲಿತ್ತ ಘಟನೆಯೂ ನಡೆದಿದೆ.