ಪ್ರತಿನಿಧಿ ವರದಿ ಮಾಲೂರು
ರಾಜ್ಯ ಸರ್ಕಾರಕ್ಕೆ ಸಮಿತಿಯು ಸಲ್ಲಿಸಿರುವ 7ನೇ ವೇತನ ಆಯೋಗದ ವರದಿ ಯಥಾವತ್ತಾಗಿ ಜಾರಿಗೊಳಿಸಬೇಕು. ರಾಜ್ಯ ಸರ್ಕಾರಿ ನೌಕರರ ಇನ್ನಿತರೆ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಲೂರು ಶಾಖೆ ವತಿಯಿಂದ ತಹಸೀಲ್ದಾರ್ ಕೆ. ರಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ. ಮುನೇಗೌಡ ರಾಜ್ಯದಲ್ಲಿ ೬,೦೦,೦೦೦ ನೌಕರರು ರಾಜ್ಯದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಚುನಾವಣೆ ಸೇರಿದಂತೆ ಇನ್ನಿತರ ಕೆಲಸಗಳನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ನೌಕರರ ಹಲವು ರೀತಿಯ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಪರಿಹಾರ ಕಲ್ಪಿಸಿದೆ. ಈ ಹಿಂದೆ ೬ನೇ ವೇತನ ಆಯೋಗ ಸಮಿತಿ ವರದಿ ಸಲ್ಲಿಸಿದ ೬ ತಿಂಗಳಲ್ಲಿ ೬ನೇ ವೇತನ ಆಯೋಗ ಸರ್ಕಾರ ಜಾರಿಗೆ ತಂದಿದೆ. ಐದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ವೇತನ ಬಗ್ಗೆ ಜನವರಿ ಒಂದು ೨೦೨೨ ರಿಂದ ಜಾರಿಗೆ ತರಬೇಕು ರಾಜ್ಯ ಸರ್ಕಾರಿ ನೌಕರರ ಸಂಘದ ಒತ್ತಡದಿಂದ ಸರ್ಕಾರ ನವಂಬರ್ ತಿಂಗಳಲ್ಲಿ ೭ನೇ ವೇತನ ಆಯೋಗವನ್ನು ರಚಿಸಿದ್ದು, ಸಮಿತಿಯು ಸಲ್ಲಿಸಿರುವ ವರದಿ ಅನ್ವಯ ಯಥಾವತ್ತಾಗಿ ೭ನೇ ವೇತನ ಆಯೋಗವನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ನೌಕರರ ಆರೋಗ್ಯದ ಹಿತದೃಷ್ಟಿಯಿಂದ ಕೆಎಎಸ್ ವರದಿಯಂತೆ ಆರೋಗ್ಯ ಸಂಜೀವಿನಿಯನ್ನು ಅನುಷ್ಠಾನಗೊಳಿಸಬೇಕು ಸರ್ಕಾರಿ ನೌಕರರಿಗೆ ಎನ್ಪಿಎಸ್ ಪಿಂಚಣಿ ಪದ್ಧತಿಯನ್ನು ರದ್ದುಪಡಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಸರ್ಕಾರಿ ಕಾರ್ಯಕ್ರಮಗಳನ್ನುಅನುಷ್ಟಾನಗೊಳಿಸಲು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಸರ್ಕಾರಿ ನೌಕರರಿಗೆ ಕೆಲಸದ ಒತ್ತಡ ಕಡಿಮೆ ಮಾಡಬೇಕು, ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದರಿಂದ ಲಕ್ಷಾಂತರ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗಲಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ನೌಕರರ ಪರವಾಗಿದ್ದು ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಿದ್ದಾರೆ ಎಂದರು.
ಸರ್ಕಾರಿ ನೌಕರರ ಸಂಘದ ಖಜಾಂಚಿ ಟಿ.ವೆಂಕಟಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ೭ನೇ ವೇತನ ಆಯೋಗ ಅನುಷ್ಠಾನಗೊಳಿಸಬೇಕು. ಆರೋಗ್ಯ ಸಂಜೀವಿನಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ಮೊದಲ ಹಂತದ ಹೋರಾಟದ ಸಲುವಾಗಿ ರಾಜ್ಯಾದ್ಯಂತ ಸರ್ಕಾರಿ ನೌಕರರ ಸಂಘಗಳ ವತಿಯಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ . ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಆಗಸ್ಟ್ ತಿಂಗಳಲ್ಲಿ ರಾಜ್ಯ ಸಂಘವು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದೆ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಖಜಾಂಚಿ ಟಿ.ವೆಂಕಟಸ್ವಾಮಿ ರಾಜ್ಯಪರಿಷತ್ ಸದಸ್ಯ ವಿನಯ್ , ನವೀನ್, ಉಪಾಧ್ಯಕ್ಷೆ ಸರೋಜಮ್ಮ, ಪ್ರಾ.ಶಾ.ಶಿ.ಸ ಅಧ್ಯಕ್ಷ ಷಣ್ಮುಖಯ್ಯ, ಗೌರವಾಧ್ಯಕ್ಷ ಆರ್.ನರಸಿಂಹ, ಸರ್ಕಾರಿ ನೌಕರ ಸಂಘದ ನಿರ್ದೇಶಕರುಗಳಾದ ಲೀಲಾವತಿ, ಚಂದ್ರಮೋಹನ್, ಪ್ರೌಢಶಾಲಾ ಶಿಕ್ಷಕರ ಸಂಘದ ಶಶಿಧರ್, ಶ್ರೀನಿವಾಸ್, ಎಂ.ಶ್ರೀನಿವಾಸ್, ಅರ್ಜುನ್, ಎಂ.ಸಿ.ಮುನಿರಾಜು, ಭಗತ್ ಸಿಂಗ್, ಹರೀಶ್, ಪಿಡಿಒಗಳಾದ ಅಂಬರೀಶ್, ಕಾಶೀನಾಥ್ ತಾಲೂಕು ಕಚೇರಿ, ಶಿಕ್ಷಣ ಇಲಾಖೆ, ಬಿಸಿಎಂ, ಸೇರಿದಂತೆ ವಿವಿಧ ನೌಕರರು ಹಾಜರಿದ್ದರು.