ಸೋಮವಾರಪೇಟೆ: ಗ್ರಾಮೀಣ ಭಾಗದಲ್ಲಿ ರೈತರ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮಾಡಿಕೊಡಬೇಕು ಎಂದು ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಅವರು ರೈತರ ಆಸ್ತಿ ದಾಖಲಾತಿ ಸಮಸ್ಯೆ ಹಾಗೂ ಕಡತ ವಿಲೇವಾರಿ ವಿಳಂಬದ ಬಗ್ಗೆ ತಹಸೀಲ್ದಾರ್ರಿಗೆ ತಿಳಿಸಿದರು. ದುರಸ್ತಿಯಾದ ಮತ್ತು ಖಾಲಿಯಿರುವ ಜಾಗದ ಬಗ್ಗೆ ಕಂದಾಯ ಇಲಾಖೆ ಪರಿಶೀಲಿಸಬೇಕು. ಗೌಡಳ್ಳಿ ಪ್ರಾಥಮಿಕ ಶಾಲೆಗೆ ಸೇರಿದ ಜಾಗಕ್ಕೆ ಕಂದಾಯ ಇಲಾಖೆ ಹಕ್ಕುಪತ್ರ ನೀಡಿದೆ. ಹಕ್ಕುಪತ್ರ ನೀಡಿದ ನಂತರ ಎಲ್ಲರೂ ಮನೆ ಕಟ್ಟಿಕೊಂಡಿದ್ದಾರೆ. ಈಗ ಕಂದಾಯ ಕಡತಗಳಲ್ಲಿ ಶಾಲೆ ಜಾಗ ಎಂದು ಬರುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಅಧಿಕಾರಿಗೆ ತಿಳಿಸಿದರು. ಶಾಂತಳ್ಳಿ ಹೋಬಳಿಯಲ್ಲಿ ವೃದ್ಧರಿಗೆ ವೃದ್ಯಾಪ್ಯ ವೇತನ ಸಿಗುತ್ತಿಲ್ಲ ಎಂದು ಹೇಳಿದರು.
ಎಲ್ಲ ಸಮಸ್ಯೆಗಳನ್ನು ಪರಿಶೀಲಿಸಿ, ಶೀಘ್ರವೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ನವೀನ್ ಕುಮಾರ್ ಭರವಸೆ ನೀಡಿದರು.
ಸಮಿತಿ ಕಾರ್ಯದರ್ಶಿ ಆದರ್ಶ್, ಕಾನೂನು ಸಲಹೆಗಾರ ಜೀವನ್ ಕುಮಾರ್, ಜಿ.ಎಂ.ಹೂವಯ್ಯ, ಲೋಹಿತ್, ಸಂದೀಪ್, ಭವಿನ್, ರವಿ, ಆಶ್ವಥ್, ಭರತ್ ಮತ್ತಿತರರು ಇದ್ದರು.
ಚಿತ್ರ:- ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ರೈತರ ಸಮಸ್ಯೆಗಳ ಬಗ್ಗೆ ತಹಸೀಲ್ದಾರ್ ಅವರಿಗೆ ತಿಳಿಸಲಾಯಿತು. ಅರುಣ್, ಆದರ್ಶ್, ಜೀವನ್, ಹೂವಯ್ಯ, ಲೋಹಿತ್ ಇದ್ದರು.
—–