ಪ್ರತಿನಿಧಿ ವರದಿ ಚಾಮರಾಜನಗರ
ತಾಲೂಕಿನ ಚಂದಕವಾಡಿ ಹೋಬಳಿಯಲ್ಲಿರುವ ವಿಶ್ವಕರ್ಮ ಸಮುದಾಯಕ್ಕೆ ರುದ್ರಭೂಮಿ ಇಲ್ಲದೇ ಅಂತ್ಯ ಸಂಸ್ಕಾರ ನೇರವೇರಿಸಲು ತೊಂದರೆ ಉಂಟಾಗಿದ್ದು, ಕೂಡಲೇ ಸ್ಮಶಾನಕ್ಕೆ ಜಾಗ ಗುರುತಿಸಿಕೊಡಬೇಕೆಂದು ಶ್ರೀವಿಶ್ವಕರ್ಮ ಕುಶಲಕರ್ಮಿಗಳ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಚಂದಕವಾಡಿ ಗ್ರಾಮದಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಸಮೀಪದ ಸರಗೂರು ಗ್ರಾಮದಲ್ಲಿ ತಲಾ ತಲಾಂತರದಿಂದ ಖಾಸಗಿಯವರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಿಕೊಂಡು ಬರಲಾಗುತ್ತಿದ್ದು, ಇತ್ತೀಚೆಗೆ ಜಮೀನಿನ ಮಾಲೀಕರು ಅಂತ್ಯ ಸಂಸ್ಕಾರ ಮಾಡಲು ಅಡ್ಡಿ ಪಡಿಸುತ್ತಿದ್ದಾರೆ. ಇದರಿಂದ ಸಂಸ್ಕಾರ ಮಾಡಲು ತೊಂದರೆಯಾಗುತ್ತಿದೆ. ಸರ್ಕಾರದಿಂದ ರುದ್ರ ಭೂಮಿ ಕಲ್ಪಿಸುವಂತೆ ತಹಸೀಲ್ದಾರ್ ಹಾಗೂ ಗ್ರಾಪಂಗೆ ಮನವಿ ಮಾಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಯವರು ಅಗತ್ಯ ಕ್ರಮ ಕೈಗೊಂಡು ನಮ್ಮ ಸಮುದಾಯಕ್ಕೆ ಭೂಮಿ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಸೌಭಾಗ್ಯ, ಜಿಲ್ಲಾಧ್ಯಕ್ಷೆ ಭಾಗ್ಯ ಸೋಮಣ್ಣಚಾರ್, ಮುಖಂಡ ನಾಗೇಂದ್ರ, ಶಶಿಕುಮಾರ್, ಬಸವಣ್ಣ, ರವಿಕುಮಾರ್, ರಂಗಸ್ವಾಮಿ, ಪವನ್, ಮಹದೇವಸ್ವಾಮಿ, ವಿನೋದ್ ಕುಮಾರ್, ರವಿ, ಸಿದ್ದರಾಜು, ದೊಡ್ಡ ಸಿದ್ದಚಾರ್, ಸಿದ್ದಲಿಂಗಾಚಾರ್, ತಮ್ಮಯ್ಯಚಾರ್, ಮಹೇಂದ್ರ, ಗಿರೀಶ್, ಲಕ್ಷ್ಮಣಾಚಾರ್ ಸೇರಿದಂತೆ ಇತರರು ಇದ್ದರು.