ಮೈಸೂರು, ಡಿ 05: ದೇವಸ್ಥಾನದ ಕಾರ್ಯಕ್ಕೆ ತಮಟೆ ಬಾರಿಸಲು ನಿರಾಕರಿಸಿದಕ್ಕೆ ವ್ಯಕ್ತಿ ಮೇಲೆ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಗ್ರಾಮದಲ್ಲಿ ನಡೆದಿದೆ. ಹಲ್ಲೆ ಮತ್ತು ಜಾತಿ ನಿಂದನೆ ಮಾಡಿದ ಕುಮಾರ್ ಎಂಬುವರ ವಿರುದ್ಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪರಮಯ್ಯ ಹಲ್ಲೆಗೊಳಗಾದ ವ್ಯಕ್ತಿ.
ಬಸವೇಶ್ವರ ದೇವಸ್ಥಾನದ ಪೂಜಾ ಕಾರ್ಯಕ್ಕೆ ಕುಳುವಾಡಿಕೆ ಮಾಡಿ ತಮಟೆ ಹೊಡದು ಸಾರುವಂತೆ ಪರಮಯ್ಯ ಅವರಿಗೆ ಕುಮಾರ್ ಹೇಳಿದರು. ಇದಕ್ಕೆ ಪರಮಯ್ಯ ತಮಟೆ ಹೊಡೆಯುವ ಕೆಲಸ ಮಾಡುತ್ತಿಲ್ಲ ಬಿಟ್ಟಿದ್ದೇನೆ ಎಂದು ಹೇಳಿದರು. ಆದರೂ ಸುಮ್ಮನಾಗದ ಕುಮಾರ್ ಅವರು ಪರಮಯ್ಯ ಅವರಿಗೆ ಒತ್ತಡ ಹಾಕಿದರು. ಒತ್ತಡಕ್ಕೆ ಮಣಿದ ಪರಮಯ್ಯ ಮಗ ಬಸವರಾಜ್, ತಮಟೆ ಹೊಡೆಯಲು ದೇವಸ್ಥಾನದ ಬಳಿ ಹೋದರು. ಈ ವೇಳೆ ಕುಮಾರ್ ದೇವಸ್ಥಾನದ ಬಳಿಗೆ ಬಂದಿದ್ದ ಪರಮಯ್ಯ ಅವರಿಗೆ ಯಾಕೆ ತಮಟೆ ಹೊಡೆಯುವುದಿಲ್ಲ ಎಂದು ಪ್ರಶ್ನಿಸಿ ಹಲ್ಲೆ ಮಾಡಿದರು.
ಗಾಯಗೊಂಡ ಪರಮಯ್ಯ ಅವರನ್ನು ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಕುಮಾರ್ ವಿರುದ್ಧ ಪರಮಯ್ಯ ಮಗ ಬಸವರಾಜ್ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.