ಹಿಂದೂಗಳ ಪಾಲಿಗೆ ಶ್ರಾವಣಮಾಸ ಅತ್ಯಂತ ನೆಚ್ಚಿನ ಮಾಸ ಅಂತಲೇ ಹೇಳಬಹುದು. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಯಾವುದೇ ಶುಭಕಾರ್ಯ ಹಾಗೂ ಹಬ್ಬಗಳನ್ನು ಆಚರಿಸುವುದಿಲ್ಲ. ಈ ಕಾರಣಕ್ಕಾಗಿಯೇ ಆಷಾಢ ಕಳೆದು ಶ್ರಾವಣ ಬಂತೆಂದರೆ ಸಂಭ್ರಮ ಮನೆಮಾಡುತ್ತೆ, ಸಾಲು ಸಾಲು ಹಬ್ಬಗಳು ಶುರುವಾಗುವ ಶ್ರಾವಣ ಮಾಸ ಹಿಂದೂ ಕ್ಯಾಲೆಂಡರ್ ನ ಪ್ರಮುಖ ಮಾಸವಾಗಿದೆ.
ಶಿವನನ್ನು ಹೆಚ್ಚಾಗಿ ಪೂಜಿಸುವ ಈ ಮಾಸದಲ್ಲಿ ಅತೀ ಹೆಚ್ಚಾಗಿ ಹಬ್ಬಗಳನ್ನ ನಾವು ಕಾಣಬಹುದು. ಶ್ರಾವಣ ಸೋಮವಾರದಂದು ಉಪವಾಸವಿದ್ದು, ಶಿವನನ್ನು ಹೆಚ್ಛಾಗಿ ಪೂಜಿಸಲಾಗುತ್ತದೆ. ಅಲ್ಲದೆ ಶ್ರಾವಣದಲ್ಲಿ ಶಿವನನ್ನು ಪೂಜಿಸುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಿಕೆ. ನಾಗರಪಂಚಮಿಯಿಂದ ಪ್ರಾರಂಭವಾಗುವ ಶ್ರಾವಣ ಮಾಸ ಮಂಗಳಗೌರಿ ವೃತ, ರಕ್ಷಾ ಬಂಧನ , ಕೃಷ್ಣ ಜನ್ಮಾಷ್ಟಮಿ, ವರ ಮಹಾಲಕ್ಷ್ಮಿ ಹಬ್ಬಗಳನ್ನೂ ಸೇರಿದಂತೆ ಉಪಾಕರ್ಮಗಳಂತಹ ಪ್ರಮುಖ ಹಿಂದೂ ದಿನಗಳನ್ನ ಒಳಗೊಂಡಿದೆ.
2024ರ ಶ್ರಾವಣ ಮಾಸವು ಆಗಸ್ಟ್ 4 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 3 ಕ್ಕೆ ಮುಕ್ತಾಯವಾಗಲಿದೆ. ಶ್ರಾವಣ ಮಾಸದ ಮೊದಲಿಗೆ ಆಗಸ್ಟ್ ಒಂಬತ್ತರಂದು ನಾಗರಪಂಚಮಿ ಹಬ್ಬವಿದೆ. ಈ ವರ್ಷದ ನಾಗರ ಪಂಚಮಿ ಹಬ್ಬವು ಆಗಸ್ಟ್ 9ರಂದು ಬಂದಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ ಆಗಸ್ಟ್ 9 ರಂದು ಬೆಳಿಗ್ಗೆ 12:36 ಕ್ಕೆ ಪ್ರಾರಂಭವಾಗಿ ಆಗಸ್ಟ್ 10 ರಂದು ಬೆಳಿಗ್ಗೆ 03:14 ಕ್ಕೆ ಕೊನೆಗೊಳ್ಳುತ್ತದೆ. ಈ ಹಬ್ಬವನ್ನು ಭಾರತದ ವಿವಿಧ ಕಡೆಗಳಲ್ಲಿ ಒನ್ನೊಂದು ರೀತಿ ಆಚರಿಸುತ್ತಾರೆ. ಕೆಲವು ಭಾಗಗಳಲ್ಲಿ ಹುತ್ತಕ್ಕೆ ತನಿ ಎರೆದು ಹಬ್ಬವನ್ನು ಆಚರಿಸಿದರೆ, ಉತ್ತರ ಕರ್ನಾಟಕ ಭಾಗದಲ್ಲಿ ಈ ಹಬ್ವವನ್ನು ಅಣ್ಣ-ತಂಗಿಯರಿಗಾಗಿಯೇ ಮೀಸಲಿಟ್ಟು ಆಚರಿಸುತ್ತಾರೆ.
ಈ ಶುಭ ದಿನದಂದು ಹುತ್ತಕ್ಕೆ ಹಾಲು ಎಳನೀರು ಹಾಕಿ ತನಿ ಎರೆಯುವುದು ವಾಡಿಕೆ.ಹಾಗೆಯೇ ನೆನೆಸಿದ ಕಡಲೆಕಾಳು, ಅಕ್ಕಿ, ಮತ್ತು ಎಳ್ಳನ್ನು ನಾಗಪ್ಪನಿಗೆ ಅರ್ಪಿಸಿ, ಬೆಳೆದ ಬೆಳೆಯನ್ನ ಕಾಪಾಡಪ್ಪ ಎಂದು ರೈತರು ನಾಗಪ್ಪನ್ನು ಬೇಡಿದರೆ, ಕೆಲ ಜನರು ಮಕ್ಕಳಿಗೆ ಏನು ಆಗದಂತೆ ರಕ್ಷಿಸಪ್ಪ ಎಂದು ತನಿ ಎರೆಯುತ್ತಾರೆ. ಇನ್ನೂ ಹಲವು ಕಡೆ ಹಾವಿಗೆ ಪ್ರತ್ಯಕ್ಷವಾಗಿ ಹಾಲು ಮತ್ತು ಆಹಾರವನ್ನು ನೀಡುವುದುಂಟು. ಒಟ್ಟಾರೆ ಶ್ರಾವಣ ಮಾಸ ಶುರುವಾಗಿದ್ದು, ಸಾಲು ಸಾಲು ಹಬ್ಬಗಳ ಸಂಭ್ರಮ ಎಲ್ಲರ ಮನೆಮನಗಳಲ್ಲಿ ಸಂತಸ ಮೂಡಿಸಬೇಕಿದೆ.