ಮೈಸೂರು ತಾಲೂಕು ಪಂಚಾಯ್ತಿ ಮಾಜಿ ಸದಸ್ಯೆಗೆ ಸೇರಿದ ನಿವೇಶನಕ್ಕೆ ಅಕ್ರಮವಾಗಿ ಪ್ರವೇಶಿಸಿದ ಮೂವರು ವ್ಯಕ್ತಿಗಳು ದಾಂಧಲೆ ಮಾಡಿದ್ದಾರೆ. ಜೆಸಿಬಿ ತಂದು ಕಟ್ಟಡವನ್ನ ಧ್ವಂಸಗೊಳಿಸಿದ್ದಾರೆ. ಪ್ರತಿರೋಧ ಒಡ್ಡಿದ ತಾಲೂಕು ಪಂಚಾಯತಿ ಮಾಜಿ ಸದಸ್ಯೆಯ ಪುತ್ರನನ್ನು ಎಳೆದೊಯ್ದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕಟ್ಟಡವನ್ನು ಧ್ವಂಸಗೊಳಿಸಿದ್ದಾರೆ. ಈ ಸಂಬಂಧ ಮೂವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ.
ಮೈಸೂರಿನ ಹೊರವಲಯದ ಹಿನಕಲ್ ಬಳಿ ಇರುವ ನಿವೇಶನದ ಸಂಖ್ಯೆ 2403 ಬಿ 3 ತಾಲೂಕು ಪಂಚಾಯ್ತಿ ಮಾಜಿ ಸದಸ್ಯೆ ಚಿಕ್ಕತಾಯಮ್ಮ ಎಂಬುವರಿಗೆ ಸೇರಿದ್ದು. ಜಿ.ಡಬ್ಲೂ.ಎಸ್. ನಿವೇಶನದಲ್ಲಿ ಚಿಕ್ಕತಾಯಮ್ಮ ಕಟ್ಟಡ ನಿರ್ಮಿಸಿದ್ದಾರೆ. ಇದೇ ನಿವೇಶನಕ್ಕೆ ಬಂದ ಮೂವರು ವ್ಯಕ್ತಿಗಳು ಏಕಾ ಏಕಿ ಜೆಸಿಬಿ ಯಂತ್ರದಿಂದ ಕಟ್ಟಡ ಕೆಡವಲು ಮುಂದಾಗಿದ್ದಾರೆ. ಇದನ್ನು ಪ್ರತಿರೋಧಿಸಿದ ಚಿಕ್ಕತಾಯಮ್ಮ ಪುತ್ರ ರಾಮ್ ಪ್ರೀತಂ ನನ್ನು ಬಲವಂತವಾಗಿ ಎಳೆದೊಯ್ದು ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕಬ್ಬಿಣದ ರಾಡಿನಿಂದ ಕಾಲಿಗೆ ಹೊಡೆದು ಗಾಯಗೊಳಿಸಿದ್ದಾರೆ. ಈ ಎಲ್ಲಾ ಘಟನೆ ಸಿಸಿ ಕ್ಯಾಮರಾದಲ್ಲಿ ಹಾಗೂ ಮೊಬೈಲ್ ನಲ್ಲಿ ಸೆರೆಯಾಗಿದೆ. ನ್ಯಾಯಾಲಯದ ಯಾವುದೇ ಆದೇಶ ಪಡೆಯದೆ ಏಕಾಏಕಿ ನಿವೇಶನಕ್ಕೆ ಅಕ್ರಮವಾಗಿ ಪ್ರವೇಶಿಸಿ ಧಮಕಿ ಹಾಕಿ ಬಲವಂತವಾಗಿ ಯುವಕನನ್ನು ಎಳೆದೊಯ್ದು ಹಲ್ಲೆ ನಡೆಸಿದ ಮೂವರ ವಿರುದ್ದ ಕ್ರಮ ಕೈಗೊಳ್ಳುವಂತೆ ಚಿಕ್ಕತಾಯಮ್ಮ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದಾಂಧಲೆ ನಡೆಸಿದವರು ಮಂಜುನಾಥ್ ಹಾಗೂ ರೌಡಿ ಶೀಟರ್ ಗಳಾದ ಲೋಕೇಶ್, ಕುಳ್ಳ ದರ್ಶನ್ ಎಂದು ಗುರುತಿಸಲಾಗಿದೆ. ಕಟ್ಟಡ ಧ್ವಂಸಗೊಳಿಸಿ ದಾಂಧಲೆ ನಡೆಸಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.