ಸಾಹಿತಿ ಎಂ.ಬಿ.ಪರಮೇಶ್ ಮಾಹಿತಿ
ಪ್ರತಿನಿಧಿ ವರದಿ ಹೊಳೆನರಸೀಪುರ
ತಾಲೂಕಿನ ಕಸಬಾ ಹೋಬಳಿ ಗುಂಜೇವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಚಿಕ್ಕಬಳ್ಳಾಪುರದ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ 2024ನೇ ಸಾಲಿನ “ಹಸಿರು ನೈರ್ಮಲ್ಯ ಹಾಗೂ ಶಾಲಾ ಅಭ್ಯುದಯ ರಾಜ್ಯ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಬಿಆರ್ಪಿ ಹಾಗೂ ಸಾಹಿತಿ ಎಂ.ಬಿ.ಪರಮೇಶ್ ತಿಳಿಸಿದ್ದಾರೆ.
ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನ ಯೋಗಾನಂದ ಮತ್ತು ಕಿರಣ್ ಅವರು ಶಾಲೆಗೆ ಭೇಟಿ ನೀಡಿ ಶಾಲಾ ಸ್ವಚ್ಛತೆ, ಹಸಿರು ನೈರ್ಮಲ್ಯ, ಶಾಲಾ ಆವರಣದಲ್ಲಿ ಬೆಳೆಸಿರುವ ಗಿಡ ಮರಗಳು, ಶಾಲಾ ಕೈತೋಟ, ಮಕ್ಕಳ ಕಲಿಕೆ, ಶಿಸ್ತು, ಸಮಯಪಾಲನೆ ಇವುಗಳನ್ನು ಪರಿಶೀಲಿಸಿ ಪ್ರಶಂಸೆ ವ್ಯಕ್ತಪಡಿಸಿ ಗುಂಜೇವು ಶಾಲೆಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇತ್ತೀಚೆಗೆ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಮಧುಸೂದನ ಸಾಯಿ ಅವರು ಶಾಲೆಗೆ 10 ಸಾವಿರ ರೂ. ಚೆಕ್, ಪಾರಿತೋಷಕ, ಶಾಲೆಗೆ ವಿವಿಧ ಪುಸ್ತಕಗಳನ್ನು ಶಾಲೆಯ ಮುಖ್ಯಶಿಕ್ಷಕ ಜಿ.ಆರ್.ಆನಂದ್ ಅವರಿಗೆ ಪ್ರದಾನ ಮಾಡಿ ಅಭಿನಂದಿಸಿದ್ದಾರೆ.
ಪ್ರಶಸ್ತಿಗೆ ಭಾಜನರಾದ ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು, ಸಿಬ್ಬಂದಿಯನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್.ಸೋಮಲಿಂಗೇಗೌಡ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಬಿ.ಎ.ಕಾಳೇಗೌಡ, ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಜಿ.ಕೆ.ರಮೇಶ್, ತಾಲೂಕಿನ ಶಿಕ್ಷಣ ಸಂಯೋಜಕರು, ಬಿ.ಆರ್.ಪಿ, ಸಿ.ಆರ್.ಪಿ ವೃಂದದವರು, ಪೋಷಕರು ಶಾಲೆಯ ಸಾಧನೆಯನ್ನು ಪ್ರಶಂಸಿಸಿದ್ದಾರೆ.