ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಶ್ರೀಧರ್ ಸಲಹೆ
ಪ್ರತಿನಿಧಿ ವರದಿ ಚಾಮರಾಜನಗರ
ಪ್ರತಿಯೊಂದು ವಸ್ತುಗಳನ್ನು ಕೊಂಡುಕೊಳ್ಳುವ ಮತ್ತು ಸೇವೆಗಳನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಅದರ ಬಗ್ಗೆ ಅರಿವು ಪಡೆದುಕೊಂಡು ಅನ್ಯಾಯದ ವಿರುದ್ಧ ಹೋರಾಟ ಮಾಡಿದಾಗ ಮಾತ್ರ ಉತ್ತಮ ಮತ್ತು ನ್ಯಾಯಯುತವಾದ ವಸ್ತುಗಳು ನಮಗೆ ತಲುಪಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತಿ ಹಳೆ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಅಳತೆ ಮತ್ತು ತೂಕ ಮಾಪನ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಗ್ರಾಹಕ ದಿನಾಚರಣೆ-2024 ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಗು ತಾಯಿಯ ಗರ್ಭದಲ್ಲಿ ಇರುವಾಗಲೇ ಗ್ರಾಹಕ ಸಂಬಂಧಗಳು ಬೆಳೆಯಲು ಆರಂಭವಾಗುತ್ತವೆ. ಗ್ರಾಹಕರ ದಿನಾಚರಣೆ ಮಾ.15ಕ್ಕೆ ಸೀಮಿತವಾಗಿರುವುದಿಲ್ಲ. ಇಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ, ಗ್ರಾಹಕರ ರಕ್ಷಣೆಯ ಬಗ್ಗೆ, ಗ್ರಾಹಕರಿಗೆ ಜಾಗೃತಿ ಮೂಡಿಸಬೇಕು. ಅವರ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಅವರಿಗೆ ಯೋಗ್ಯವಾದ ವಸ್ತುಗಳನ್ನು ತಲುಪಿಸಬೇಕು ಎನ್ನುವ ನಿಟ್ಟಿನಲ್ಲಿ 1986ರಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆ ಜಾರಿಗೆ ಬಂತು ಎಂದು ತಿಳಿಸಿದರು.
ಗ್ರಾಹಕರಿಗೆ ಮೋಸಕ್ಕೆ ಪರಿಹಾರ : ಗ್ರಾಹಕರ ರಕ್ಷಣಾ ಕಾಯ್ದೆಯಲ್ಲಿ ಪ್ರತಿಯೊಬ್ಬ ಗ್ರಾಹಕರಿನಿಗೂ ಸುರಕ್ಷತೆಯ ಹಕ್ಕು, ಆಯ್ಕೆಯ ಹಕ್ಕು, ಮಾಹಿತಿ ಹಕ್ಕು, ದೂರು ದಾಖಲಿಸುವ ಹಕ್ಕು, ಪರಿಹಾರ ಪಡೆದುಕೊಳ್ಳುವ ಹಕ್ಕು, ಆರೋಗ್ಯ ಪೂರ್ಣ ಪರಿಸರ ಹೊಂದುವ ಹಕ್ಕು ನೀಡಲಾಗಿದೆ. ನಾವು ಪಡೆದುಕೊಳ್ಳುವ ವಸ್ತುಗಳು ಹಾಗೂ ಸೇವೆಗಳು ತೃಪ್ತಿಕರವಾಗಿಲ್ಲಎಂದು ಕಂಡು ಬಂದರೆ, ಮಾರಾಟಗಾರರ ವಿರುದ್ಧ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು. ಜಿಲ್ಲಾ ಮಟ್ಟದಲ್ಲಿ 50 ಲಕ್ಷ, ರಾಜ್ಯಮಟ್ಟದಲ್ಲಿ 1 ಕೋಟಿವರೆಗೂ ಪರಿಹಾರ ಪಡೆಯಲು ಅವಕಾಶವಿರಲಿದೆ. ದೂರು ದಾಖಲಿಸಲು ವಕೀಲರ ಅಗತ್ಯವಿರುವುದಿಲ್ಲ. ನಾವು ಕೊಂಡುಕೊಳ್ಳುವ ವಸ್ತುಗಳ ಬಿಲ್ಗಳಿದ್ದರೆ ಸಾಕು. ಹೀಗಾಗಿ ಪ್ರತಿಯೊಬ್ಬ ಗ್ರಾಹಕರಿಗೂ ಈ ಕಾಯಿದೆಯ ಬಗ್ಗೆಅರಿವು ಅಗತ್ಯವಾಗಿದೆ ಎಂದರು.
ಜಿ.ಪಂ.ಉಪ ಕಾರ್ಯದರ್ಶಿ ಲಕ್ಷ್ಮೀ ಮಾತನಾಡಿ, ಗ್ರಾಹಕರಿಗೆ ಕೊಂಡುಕೊಳ್ಳುವ ವಸ್ತುಗಳ ಬಗ್ಗೆ ಹಾಗೂ ಪಡೆದುಕೊಳ್ಳುವ ಸೇವೆಗಳ ಬಗ್ಗೆ ಅರಿವು ಅಗತ್ಯ. ಗ್ರಾಹಕರು ತಮಗೆ ಯಾವ ಹಕ್ಕುಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕು. ಅದರಲ್ಲೂ ಮಹಿಳೆಯರು ಇದರ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ ಎಂದರು.
ನಿತ್ಯ ಗ್ರಾಹಕರಿಗೆ ಆಗುತ್ತಿರುವ ಅನ್ಯಾಯ ತಿಳಿಸಿಕೊಟ್ಟು, ಅದನ್ನು ಪರಿಹರಿಸಿಕೊಡಲು ಸರ್ಕಾರ ಅನೇಕ ಇಲಾಖೆಗಳನ್ನು ನೇಮಕ ಮಾಡಿದೆ. ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಅದರ ಗುಣಮಟ್ಟ ಮತ್ತು ತೂಕವನ್ನು ಖಾತ್ರಿ ಪಡಿಸಿಕೊಳ್ಳಬೇಕು. ತೂಕದ ವಿಚಾರದಲ್ಲಿ ಪ್ರತೀ ಗ್ರಾಹಕರೂ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ವರ್ತಕರಿಂದ ಮೋಸ ಹೋದ ಗ್ರಾಹಕರಿಗೆ ನ್ಯಾಯಕೊಡಿಸಲು ವ್ಯಾಜ್ಯಗಳ ಪರಿಹಾರ ಆಯೋಗ ಕೆಲಸ ಮಾಡುತ್ತಿದೆ. ಮೋಸ ಹೋದ ಗ್ರಾಹಕರು ಆಯೋಗಕ್ಕೆ ತೆರಳಿ ಅಲ್ಲಿನ ಅಧಿಕಾರಿಗಳ ಸಹಾಯ ಪಡೆಯಬಹುದು. ರಾಜ್ಯದಲ್ಲಿ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಬಾಕ್ಸ್..
ಕಡ್ಡಾಯವಾಗಿ ಮತದಾನ ಮಾಡಿ : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಮತದಾರರು ಮತದಾನ ಮಾಡಿ ಚಾಮರಾಜನಗರ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆಯಬೇಕಿದೆ. ಹೀಗಾಗಿ ಜಿಲ್ಲೆಯ ಪ್ರತಿಯೊಬ್ಬ ಮತದಾರರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿ.ಪಂ.ಉಪ ಕಾರ್ಯದರ್ಶಿ ಲಕ್ಷ್ಮೀ ಮನವಿ ಮಾಡಿದರು.
ಜಿಲ್ಲೆಯ ಎಲ್ಲ ಮತದಾರರೂ ಯಾವುದೇ ಕಾರಣಕ್ಕೂ ಮತದಾನ ಬಹಿಷ್ಕರಿಸಬಾರದು. ಮತದಾನ ಮಾಡದಿದ್ದರೆ ನಾವು ಭಾರತೀಯರಾಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು. ಜಿಲ್ಲೆಯಲ್ಲಿ ಜಾನಪದ ಬೂತ್, ಹಸಿರು ಬೂತ್ ಹಾಗೂ ಅನ್ನದಾತ ಬೂತ್ ಎನ್ನುವ ಮೂರು ಬಗೆಯ ವಿಶೇಷ ಮತಗಟ್ಟೆಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಎಂ.ವಿ.ಭಾರತಿ, ಸದಸ್ಯ ಕೆ.ಎಸ್.ರಾಜು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಸವಿತಾ, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಬಿ.ಎನ್.ರಾಜೀವ್, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕ ಬಾಲಕೃಷ್ಣ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯೋಜಕಿ ಶಿವರಾಜಮ್ಮ ಸೇರಿದಂತೆ ಇತರರು ಇದ್ದರು.
20ಸಿಎಚ್ಎನ್.1: ಚಾಮರಾಜನಗರದ ಜಿ.ಪಂ.ಹಳೇ ಕೆಡಿಪಿ ಸಭಾಂಗಣದಲ್ಲಿ ನಡೆದ ವಿಶ್ವ ಗ್ರಾಹಕ ದಿನಾಚರಣೆ-2024 ಕಾರ್ಯಕ್ರಮವನ್ನು ಜಿ.ಪಂ.ಉಪ ಕಾರ್ಯದರ್ಶಿ ಲಕ್ಷ್ಮೀ ಉದ್ಘಾಟಿಸಿದರು.