ಪ್ರಗತಿಪರ ಚಿಂತಕ ದಾಸನೂರು ಕೂಸಣ್ಣ ಅಭಿಪ್ರಾಯ । ಬಾಬು ಜಗಜೀವನ್ರಾಮ್ ಜಯಂತಿ
ಪ್ರತಿನಿಧಿ ವರದಿ ಚಾಮರಾಜನಗರ
ದೇಶದ ಆಹಾರ ಕ್ಷೇತ್ರದ ಸ್ವಾವಲಂಬನೆಗೆ ಹಸಿರುಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ರಾಮ್ ಅವರ ಕೊಡುಗೆ ಅಪಾರವಾಗಿದೆ ಎಂದು ಮೈಸೂರಿನ ಪ್ರಗತಿಪರ ಚಿಂತಕ ದಾಸನೂರು ಕೂಸಣ್ಣ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ವರನಟ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆಯ ಸಹಯೋಗದಲ್ಲಿ ನಡೆದ ಭಾರತದ ಮಾಜಿ ಉಪಪ್ರಧಾನಿ, ರಾಷ್ಟ್ರನಾಯಕ ಡಾ.ಬಾಬು ಜಗಜೀವನ್ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕೀಯ ಮುತ್ಸದ್ದಿಯಾಗಿದ್ದ ಬಾಬೂಜಿ ಅವರು ದೇಶವು ಆಹಾರ ಸಮಸ್ಯೆ ಎದುರಿಸಿದ ಸಮಯದಲ್ಲಿ ಸಮಗ್ರ ಆಹಾರ ನೀತಿಯನ್ನು ಜಾರಿಗೊಳಿಸಿ, ಭಾರತವು ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ದೇಶದ ದಲಿತ ಚರಿತ್ರೆಯಲ್ಲಿ ಅಸಮಾನತೆ, ಹಸಿವು, ಅಪಮಾನ, ದೌರ್ಜನ್ಯಕ್ಕೊಳಗಾದವರನ್ನು ಸಂಕಷ್ಟದಿಂದ ಮೇಲೆತ್ತಿ ಸಮಾನತೆಯ ಬೆಳಕು ಚೆಲ್ಲಿದವರಲ್ಲಿ ಬಾಬೂಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಗ್ರಗಣ್ಯರು. ವ್ಯಕ್ತಿತ್ವ, ನಡೆ-ನುಡಿ ಬದ್ದತೆ, ಕ್ರೀಯಾಶೀಲತೆಯಲ್ಲಿ ಇಂದಿನ ರಾಜಕಾರಣಿಗಳಿಗೆ ಬಾಬೂಜಿಯವರು ಮಾದರಿಯಾಗಿದ್ದಾರೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಕಾಯ್ದೆಗೆ ಭದ್ರಬುನಾದಿ ಹಾಕಿದರು. ಅದರ ಅನುಷ್ಠಾನದಲ್ಲಿ ಬಾಬೂಜಿ ಅವರ ಕಾಣಿಕೆ ಅಪಾರವಾಗಿದೆ. ಕಾರ್ಮಿಕರ ರಕ್ಷಣೆ, ಸಬಲೀಕರಣಕ್ಕೆ ನಾಂದಿ ಹಾಡಿ, ಕಾರ್ಮಿಕರು ದೇಶದಲ್ಲಿ ಸುಭದ್ರ ಜೀವನ ನಡೆಸಲು ಈ ಇಬ್ಬರು ಮಹನೀಯರು ಕಾರಣೀಭೂತರಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಕಚೇರಿ ಸ್ಥಾಪನೆ ಮೂಲಕ ಪ್ರತಿ ಹಳ್ಳಿಹಳ್ಳಿಗಳಲ್ಲಿಯೂ ಜನರ ಹೂಡಿಕೆಯನ್ನು ಪ್ರೋತ್ಸಾಹಿಸಿ ಜನಸಾಮಾನ್ಯರು ಅರ್ಥಿಕ ಸದೃಢತೆ ಹೊಂದಲು ನೆರವಾದರು ಎಂದು ದಾಸನೂರು ಕೂಸಣ್ಣ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಕಿರಣ್ ಪಢ್ನೇಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಸಿರುಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರು ದೇಶದಲ್ಲಿ ಉತ್ತಮ ಆಹಾರ ನೀತಿಯನ್ನು ಅನುಷ್ಠಾನಗೊಳಿಸಿ ರೈತರ ಬೆನ್ನುಲುಬು ಆಗಿದ್ದರು. ಶೋಷಿತರ ಪರವಾಗಿ ವಿದ್ಯಾರ್ಥಿದೆಸೆಯಲ್ಲಿಯೇ ಹೋರಾಡಿದ ಬಾಬೂಜೀಯವರು ಹಲವಾರು ಮಹೋನ್ನತ ಸ್ಥಾನಗಳನ್ನು ಅಲಂಕರಿಸಿ ದೇಶದ ರಾಜಕೀಯ ಕ್ಷೇತ್ರಕ್ಕೆ ಮೆರುಗು ತಂದಿದ್ದಾರೆ ಎಂದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಆರ್.ಎಸ್.ಸುರೇಶ್ ಮಾತನಾಡಿ, ಸಮಾಜ ಸುಧಾರಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಡಾ.ಬಾಬು ಜಗಜೀವನರಾಮ್ ಅವರ ಚಿಂತನೆಗಳು, ರಾಜಕೀಯ ಮಜಲುಗಳು ದೇಶದ ಜನರಿಗೆ ಅರ್ಥವಾಗಬೇಕಿದೆ. ಅವರ ರಾಜಕೀಯ ಸಾಧನೆ ಅವಿಸ್ಮರಣೀಯವಾಗಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು-ಬರಹ ವಿವಿಧ ಸಂಪುಟಗಳಾಗಿ ಮುದ್ರಿತವಾಗಿರುವ ಮಾದರಿಯಲ್ಲಿ ಬಾಬೂಜಿಯವರ ಬದುಕು-ಬರಹ, ಸಾಧನೆಗಳನ್ನು ಸಂಪುಟಗಳಾಗಿ ಮುದ್ರಿಸುವಲ್ಲಿ ಗಮನಹರಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಬೀಬ್ ಮಾತನಾಡಿ, ದೇಶದಲ್ಲಿ ಮಹನೀಯರ ಜಯಂತಿಗಳನ್ನು ಆಚರಿಸುವ ಉದ್ದೇಶ ಅವರ ವಿಚಾರಧಾರೆಗಳ ಬಗ್ಗೆ ಜನತೆಗೆ ಅರಿವು ಮೂಡಿಸುವುದೇ ಆಗಿದೆ. ಅವರ ಜೀವನ ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ, ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಪದ್ಮಜಾ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕಿ ಮಂಜುಳ, ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಸೇರಿದಂತೆ ಇತರರು ಇದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಚಾಮರಾಜೇಶ್ವರ ದೇವಾಲಯದಿಂದ ಹೊರಟ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ ಅವರು ಚಾಲನೆ ನೀಡಿದರು.
5ಸಿಎಚ್ಎನ್.6:ಚಾಮರಾಜನಗರದ ವರನಟ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ನಡೆದ ಡಾ.ಬಾಬು ಜಗಜೀವನ್ರಾಮ್ ಅವರ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಕಿರಣ್ ಪಢ್ನೇಕರ್ ಉದ್ಘಾಟಿಸಿದರು.