ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಎಗ ಮಾತಾಡಿದ ಹೆಚ್ ಡಿ ಕುಮಾರಸ್ವಾಮಿ ಅವರು, ತನಗೆ ಕೇಂದ್ರದಲ್ಲಿ ಯಾವುದೇ ಖಾತೆಯ ಮಂತ್ರಿಯಾಗುವುದು ಆದ್ಯತೆಯಲ್ಲ, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಜನ ಆಶೀರ್ವದಿಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ, ಹಲವಾರು ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ, ಈ ಯೋಜನೆಗಳನ್ನು ಪುನರಾರಂಭಿಸುವುದು ತನ್ನ ಮೊದಲ ಪ್ರಾಶಸ್ತ್ಯವಾಗಿದೆ ಎಂದು ಹೇಳಿದರು. ದೇಶವನ್ನು ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯೆಡೆ ಮುನ್ನಡೆಸಬೇಕಿದೆ. ಹೊಸ ಸರ್ಕಾರದ ಯೋಜನೆ ಮತ್ತು ಪ್ರಾಶಸ್ತ್ಯಗಳು ಏನಾಗಿರಲಿವೆಯೋ? ಇಂಥ ಸಂದರ್ಭದಲ್ಲಿ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡೋದು ಮುಜುಗುರ ಹುಟ್ಟಿಸುತ್ತದೆ ಎಂದು ಕುಮಾರಸ್ವಾಮಿ ಹೇಳಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಮೈಸೂರು ದಕ್ಷಿಣ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರಗಳಿಂದ ಮೈತ್ರಿ ಅಭ್ಯರ್ಥಿಗಳಾದ ಭೋಜೇಗೌಡ ಮತ್ತು ವಿವೇಕಾನಂದ ಭರ್ಜರಿ ಗೆಲುವು ಸಾಧಿಸಿರುವುದನ್ನು ಕೊಂಡಾಡಿದ ಕುಮಾರಸ್ವಾಮಿ, ಅವರ ಯಶಸ್ಸಿಗೆ ಕಾರಣರಾದ ಎರಡೂ ಪಕ್ಷಗಳ ಮುಖಂಡರಿಗೆ, ಕಾರ್ಯಕರ್ತರಿಗೆ ಮತ್ತು ಮುಖ್ಯವಾಗಿ ಶಿಕ್ಷಕರಿಗೆ ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.