ಬೆಂಗಳೂರು, (ಡಿ04): ಇಂದು ಬೆಳ್ಳಂಬೆಳ್ಳಗೆ ಲೋಕಾಯುಕ್ತ ಅಧಿಕಾರಿಗಳು ಕರ್ನಾಟಕದ ಹಲವಡೆ ಏಕಾಕಾಲಕ್ಕೆ ದಾಳಿ ಮಾಡಿದ್ದು, ಹಲವು ಇಲಾಖೆ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ದಾರೆ. ಇನ್ನು ಲೋಕಾಯುಕ್ತ ಅಧಿಕಾರಿಗಳ ದಾಳಿಗೆ ಬೆಂಗಳೂರಿನ ಜಯನಗರ ಬೆಸ್ಕಾಂ ಉಪವಿಭಾಗದ ಇಇ ಚನ್ನಕೇಶವ ಆಘಾತಕ್ಕೊಳಗಾಗಿದ್ದು, ಅವರ ಬಿಪಿಯಲ್ಲಿ ಏರುಪೇರಾಗಿದೆ. ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ನಿದ್ದೆಗಣ್ಣಲ್ಲಿದ್ದ ಚನ್ನಕೇಶವ ಅವರಿಗೆ ಹೈಬಿಪಿಯಾಗಿದೆ. ಕೂಡಲೇ ಅವರ ಪತ್ನಿ ಹಾಗೂ ಅಧಿಕಾರಿಗಳು ಮಾತ್ರೆ ನೀಡದ ಬಳಿಕ ಚನ್ನಕೇಶವ ಅವರು ಸುಧಾರಿಸಿಕೊಂಡಿದ್ದಾರೆ.
ಇನ್ನು ಅಮೃತಹಳ್ಳಿಯ ಅಪಾರ್ಟ್ಮೆಂಟ್ನ ನಿವಾಸದಲ್ಲಿ ಪರಿಶೀಲನೆ ವೇಳೆ 6 ಲಕ್ಷ ನಗದು, ಅಂದಾಜು 3 ಕೆಜಿ ಚಿನ್ನ, 28ಕೆಜಿ ಬೆಳ್ಳಿ, 25 ಲಕ್ಷ ರೂ. ಮೌಲ್ಯದ ಡೈಮಂಡ್ ಸೇರಿದಂತೆ ಒಟ್ಟು 1.5 ಕೋಟಿ.ರೂಪಾಯಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿವೆ.
ಅಮೃತಹಳ್ಳಿಯ ಖಾಸಗಿ ಅಪಾರ್ಟ್ಮೆಂಟ್ ನ ನಿವಾಸಕ್ಕೆ ಇಂದು ಬೆಳಗ್ಗೆ 6 ಗಂಟೆಗೆ ಲೋಕಾಯುಕ್ತ ಅಧಿಕಾರಿಗಳು ಬಾಗಿಲು ಬಡಿದಿದ್ದಾರೆ. ಈ ವೇಳೆ ಪತ್ನಿ ಮನೆ ಬಾಗಿಲು ತೆರೆದಿದ್ದಾರೆ. ಬಳಿಕ ಚನ್ನಕೇಶವ ಅವರು ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಸದ್ಯ ಅವರು ಸುಧಾರಿಸಿಕೊಂಡಿದ್ದು, ದಾಖಲೆ ಪರಿಶೀಲನೆಗೆ ಸಹಕಾರ ನೀಡುತ್ತಿದ್ದಾರೆ. ಈ ಹಿನ್ನೆಲೆಯ್ಲಲಿ ಲೋಕಾಯುಕ್ತ ಅಧಿಕಾರಿಗಳು ಸಹ ಚನ್ನಕೇಶವ ಹಾಗೂ ಅವರ ಪತ್ನಿ ಸಮ್ಮುಖದಲ್ಲೇ ಮನೆಯಲ್ಲಿ ಶೋಧ ನಡೆಸಿದ್ದಾರೆ ಎಂದು ತಿಳಿದುಬಂದಿದೆ.