ಹಾಸನ: ಜಿಲ್ಲೆಯ ಪ್ರಮುಖ ಜೆಡಿಎಸ್ ನಾಯಕಿಯೆನಿಸಿಕೊಂಡಿರುವ ಭವಾನಿ ರೇವಣ್ಣ ಕಂಗೆಟ್ಟಿದ್ದಾರೆ ಮತ್ತು ಬಸವಳಿದಿದ್ದಾರೆ. ದೃಶ್ಯಗಳಲ್ಲಿ ಅವರನ್ನು ನೋಡಿ. ಸದಾ ಲವಲವಿಕೆಯಿಂದ ಮತ್ತು ಮುಖದಲ್ಲಿ ಮಾಸದ ಮುಗುಳ್ನಗುವಿನೊಂದಿಗೆ ಕೆಮೆರಾ ಕಣ್ಣುಗಳಿಗೆ ಕಾಣುತ್ತಿದ್ದ ಭವಾನಿ ಈಗ ನಿಸ್ತೇಜಿತರಾಗಿದ್ದಾರೆ, ಮುಖದಲ್ಲಿ ಕಳೆಯೇ ಇಲ್ಲ. ಅವರಿಗೆ ಬಂದೊದಗಿರುವ ಸ್ಥಿತಿಯೇ ಹಾಗಿದೆ. ಪತಿ ಎಸ್ಐಟಿ ಬಂಧನದಲ್ಲಿ ಮತ್ತು ವಿದೇಶಕ್ಕೆ ಹಾರಿ ತಲೆಮರೆಸಿಕೊಂಡಿದ್ದರೆ ಯಾವ ಮಹಿಳೆ ತಾನೇ ಸಮಾಧಾನದಿಂದ ಇರೋದಿಕ್ಕೆ ಸಾಧ್ಯ? ಜೆಡಿಎಸ್ ನಾಯಕರು ಭವಾನಿಯವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಮಾಜಿ ಶಾಸಕ ಮತ್ತು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆಎಸ್ ಲಿಂಗೇಶ್ ಮತ್ತು ಶ್ರವಣಬೆಳಗೊಳ ಶಾಸಕ ಸಿಎನ್ ಬಾಲಕೃಷ್ಣ ಇಂದು ಹೊಳೆನರಸೀಪುರದಲ್ಲಿರುವ ಹೆಚ್ ಡಿ ರೇವಣ್ಣ ಮನೆಗೆ ಭೇಟಿ ನೀಡಿ ಭವಾನಿ ಅವರಿಗೆ ಸಾಂತ್ವನ ಹೇಳಿದರು. ರೇವಣ್ಣ ಅವರನ್ನು ನ್ಯಾಯಾಲಯವು 4 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ಒಪ್ಪಿಸಿದೆ ಮತ್ತು ಪ್ರಜ್ವಲ್ ರೇವಣ್ಣ ಯಾವಾಗ ಭಾರತಕ್ಕೆ ಹಿಂತಿರುಗಲಿದ್ದಾರೆ ಅನ್ನೋದು ಇನ್ನೂ ಖಚಿತಪಟ್ಟಿಲ್ಲ. ಪ್ರಜ್ವಲ್ ಬೆಂಗಳೂರಲ್ಲಿ ಲ್ಯಾಂಡ್ ಆದ ತಕ್ಷಣ ಎಸ್ಐಟಿ ಅವರನ್ನೂ ಬಂಧಿಸಲಿದೆ.