ಮೈಸೂರು: ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಭೂ ಸಂಕಷ್ಟ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸಾಲುಸಾಲು ಹಗರಣಗಳಿಂದ ಕಂಗೆಟ್ಟಿರುವ ಸಿಎಂ ಸಿದ್ದರಾಮಯ್ಯ ಮತ್ತು ಕುಟುಂಬಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮೈಸೂರಿನ RTI ಕಾರ್ಯಕರ್ತ ಗಂಗರಾಜು ಸಿಎಂ ಪತ್ನಿ ಪಾರ್ವತಿಯವರ ಮತ್ತೊಂದು ಕರ್ಮಕಾಂಡವನ್ನು ಬಯಲಿಗೆಳೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮೇಲೆ ಮತ್ತೊಂದು ಭೂ ಅಕ್ರಮದ ಆರೋಪ ಎದುರಾಗಿದೆ. ಮೈಸೂರಿನ ಕೆ ಆರ್ ಎಸ್ ರಸ್ತೆಯಲ್ಲಿರುವ ಸರ್ವೇ ನಂಬರ್ 454ರ ಗಣೇಶ್ ದೀಕ್ಷಿತ್ ಎಂಬುವವರಿಗೆ ಸೇರಿದ 4 ಎಕರೆ 11 ಗುಂಟೆ ಮುಡಾಗೆ ಜಾಗದಲ್ಲಿ, 20 ಗುಂಟೆ ಜಾಗವನ್ನು ಸಿಎಂ ಪತ್ನಿ ಪಾರ್ವತಿ ಖರೀದಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ 20 ಗುಂಟೆ ಜಾಗವನ್ನು ದಿನಾಂಕ 29.9.2023 ರಂದು ರಿಜಿಸ್ಟ್ರಾರ್ ಮೂಲಕ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಒಟ್ಟಾರೆ (20 ಗುಂಟೆ) 21,771,99 ಚದರಡಿ ಜಾಗವನ್ನು 1 ಕೋಟಿ 85 ಲಕ್ಷ ಕೊಟ್ಟು ಖರೀದಿಸಿ ರಿಜಿಸ್ಟ್ರಾರ್ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲಿ 8998 ಚದರಡಿ ಜಾಗ ರಸ್ತೆ ಮತ್ತು ಪೈಪ್ ಲೈನ್ ಗೆ ಸೇರಿದ್ದ ಜಾಗವಾಗಿತ್ತು. ಆದರೆ ರಸ್ತೆ ಮತ್ತು ಪೈಪ್ ಲೈನ್ ಗೆ ಸೇರಿದ್ದ ಜಾಗವನ್ನೂ ಸೇರಿಸಿಕೊಂಡು ಪಾರ್ವತಿ ತಮ್ಮ ಹೆಸರಿಗೆ ರಿಜಿಸ್ಟ್ರಾರ್ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದೀಗ ಈ ಸಂಬಂಧ ಆರ್ ಟಿ ಐ ಕಾರ್ಯಕರ್ತರು ಅರ್ಜಿ ಹಾಕುತ್ತಿದ್ದಂತೆ ಎಚ್ಚೆತ್ತ ಸಿಎಂ ಪತ್ನಿ ಪಾರ್ವತಿ, ದಿನಾಂಕ 31.8.2024 ರಂದು ಮತ್ತೆ ರಿಜಿಸ್ಟ್ರಾರ್ ತಿದ್ದುಪಡಿ ಮಾಡಿಸಿದ್ದಾರೆ. ಮುಡಾ ಜಾಗವನ್ನು ಬಿಟ್ಟು ಇನ್ನುಳಿದ 12,782 ಚದರಡಿ ಜಾಗಕ್ಕೆ ಮಾತ್ರ ತಿದ್ದುಪಡಿ ಮಾಡಿಸಿ ರಿಜಿಸ್ಟ್ರಾರ್ ಮಾಡಿಸಿಕೊಂಡಿದ್ದಾರೆ. ಈ ಕುರಿತು ಆರ್ ಟಿ ಐ ಕಾರ್ಯಕರ್ತ ಗಂಗರಾಜು ದಾಖಲೆಗಳನ್ನು ಪ್ರದರ್ಶಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವುದಾಗಿ ಗಂಗರಾಜು ತಿಳಿಸಿದ್ದಾರೆ.