ಬೆಂಗಳೂರು ಡಿ.28: ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಣಕ್ಕಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ರೋಗಿಗಳಿಂದ ಸಂಗ್ರಹಿಸಿದ್ದ ‘ಬಯಾಪ್ಸ್ ಸ್ಯಾಂಪಲ್ಸ್’ (ಜೀವಕಣಗಳು) ಅನ್ನು ಸಂಸ್ಥೆಯ ನೌಕರರು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಹಾನ್ಸ್ ಸಂಸ್ಥೆಯ ನರರೋಗ ಶಾಸ್ತ್ರ ವಿಭಾಗದ ತಾಂತ್ರಿಕ ನೌಕರ ಎಂ.ಆರ್.ಚಂದ್ರಶೇಖರ್ ಮತ್ತು ಶವಗಾರದ ಸಹಾಯಕ ಎಸ್.ಅಣ್ಣಾದೊರೈ ಹಾಗೂ ಕೇರಳ ಮೂಲದ ರಘುರಾಮ್ ವಿರುದ್ಧ ಆರೋಪ ಬಂದಿದೆ. ಈ ಸಂಬಂಧ ನಿಮ್ಹಾನ್ಸ್ ಸಂಸ್ಥೆಯ ಕುಲಸಚಿವ ಡಾ। ಶಂಕರನಾರಾಯಣ್ ರಾವ್ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ.
ಇತ್ತೀಚೆಗೆ ಆಸ್ಪತ್ರೆಯ ಶವಗಾರಕ್ಕೆ ನರರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ। ಅನಿತಾ ಮಹಾದೇವನ್ ಹಾಗೂ ಹೆಚ್ಚುವರಿ ಪ್ರಾಧ್ಯಾಪಕ ಡಾ. ಬಿ.ಎನ್.ನಂದೀಶ್ ತಂಡ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ವೇಳೆ ಬಯಾಪ್ಸ್ ಸ್ಯಾಂಪಲ್ಸ್ನಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ವಿಚಾರಣೆ ನಡೆಸಿದಾಗ ಈ ಕಳ್ಳತನ ಕೃತ್ಯ ಬಯಲಾಗಿದೆ.
200 ಸ್ಯಾಂಪಲ್ಸ್ ಮಾರಾಟ?
ನಾಲ್ಕು ತಿಂಗಳಲ್ಲಿ ಸುಮಾರು 200ಕ್ಕೂ ಹೆಚ್ಚಿನ ರೋಗಿಗಳ ಬಯಾಪ್ಸ್ ಸ್ಯಾಂಪಲ್ಸ್ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಆರೋಪಿಗಳಾದ ಚಂದ್ರಶೇಖರ್ ಹಾಗೂ ಅಣ್ಣಾದೊರೈನನ್ನು ವಿಚಾರಣೆ ನಡೆಸಲಾಗಿದೆ. ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಕೇರಳದ ರಘುನಾಥ್ ಖಾಸಗಿ ವ್ಯಕ್ತಿಯಾಗಿದ್ದು, ಆತನ ಪೂರ್ವಾಪರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಲ್ಲದೆ ಬಯಾಪ್ಸ್ ಸ್ಯಾಂಪಲ್ಸ್ ವಿಚಾರವಾಗಿ ಕೆಲವು ವೈದ್ಯಕೀಯ ಗೊಂದಲಗಳ ಬಗ್ಗೆ ನಿಮ್ಹಾನ್ಸ್ ಸಂಸ್ಥೆಯಿಂದ ಸ್ಪಷ್ಟನೆ ಕೇಳಿದ್ದೇವೆ. ನಿಮ್ಹಾನ್ಸ್ ಸಂಸ್ಥೆಯ ವರದಿ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.