ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಜನರನ್ನು ಕೇರಳಕ್ಕೆ ಕರೆದುಕೊಂಡು ಹೋಗುತ್ತಿದ್ದ 15 ಬಸ್ಗಳನ್ನು ಬಿಜೆಪಿ ಮತ್ತು ಭಜರಂಗದಳ ಕಾರ್ಯಕರ್ತರು ತಡೆದಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಬಂದ ಚುನಾವಣಾ ಅಧಿಕಾರಿಗಳು 5 ಬಸ್ಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣ ಸಂಬಂಧ ಕಾಂಗ್ರೆಸ್ ಕಾರ್ಯಕರ್ತ ಅಜ್ಮಲ್ ಮಾತನಾಡಿ, ಕೆಲಸಕ್ಕೆ ಅಂತ ಕೇರಳದಿಂದ ಇಲ್ಲಿಗೆ ಬಂದಿದ್ದ ಜನ ಮತ ಹಾಕಲು ಅವರ ಊರಿಗೆ ಹೊರಟಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಬಸ್ ಸಿಗುತ್ತಿಲ್ಲ. ಹೀಗಾಗಿ ಅವರು ಸ್ವಂತ ಖರ್ಚಿನಲ್ಲಿ ಕೇರಳಕ್ಕೆ ಹೊರಟಿದ್ದರು ಎಂದು ಹೇಳಿದರು.
ತಮಿಳುನಾಡಿನಲ್ಲಿ ಮತದಾನ ನಡೆದಾಗ ಹೊಸೂರಿನಿಂದ ಬಸ್ಗಳು ಹೋದವು. ಆವಾಗ ಯಾಕೆ ಚುನಾವಣಾ ಅಧಿಕಾರಿಗಳು ಬಂದಿಲ್ಲ. ಸೌಮ್ಯರೆಡ್ಡಿ ಪರ ಒಳ್ಳೆ ಪ್ರತಿಕ್ರಿಯೆ ಬರುತ್ತಿದೆ. ಹೀಗಾಗಿ ಮೈಂಡ್ ಡೈವರ್ಟ್ ಮಾಡುವುದಕ್ಕಾಗಿ ಪ್ಲಾನ್ ಮಾಡುತ್ತಿದ್ದಾರೆ. ಒಂದು ಟ್ರಸ್ಟ್ ಮೂಲಕ ಕೇರಳಕ್ಕೆ ಹೋಗುತ್ತಿದ್ದಾರೆ. ಅವರು ಹೋಗುತ್ತಿದ್ದ ಬಸ್ಗಳನ್ನು ತಡೆದು ಸುಳ್ಳು ಆರೋಪ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರೇ ಬಸ್ಗಳಲ್ಲಿ ಕಾಂಗ್ರೆಸ್ ಕರಪತ್ರಗಳನ್ನು ಹಾಕಿದ್ದಾರೆ ಎಂದು ಆರೋಪ ಮಾಡಿದರು.
ಮಲಬಾರ್ ಟ್ರಸ್ಟ್ ಒಳಗಡೆ 600 ಜನ ಸೇರಿದ್ದರು
ಮಲಬಾರ್ ಟ್ರಸ್ಟ್ ಒಳಗಡೆ 600 ಜನ ಸೇರಿದ್ದರು. ಈ ಬಗ್ಗೆ FST ಟೀಂಗೆ ಮಾಹಿತಿ ನೀಡಿದ್ವಿ. ಅರ್ಧ ಗಂಟೆ ಬಿಟ್ಟು ತಂಡ ಸ್ಥಳಕ್ಕೆ ಆಗಮಿಸಿತು. ಕಾಂಗ್ರೆಸ್ಗೆ ಸೇರಿದ ಸಾಕಷ್ಟು ವಸ್ತುಗಳು ಇದ್ದವು. ಅವರ ಉದ್ದೇಶ ಏನು ಅಂತ ಅವರೇ ಹೇಳಬೇಕು ಎಂದು ಬಿಜೆಪಿ ಕಾರ್ಯಕರ್ತ ವಸಂತ್ ಹೇಳಿದರು.