ಪ್ರತಿನಿಧಿ ವರದಿ ತಿ.ನರಸೀಪುರ
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದ ಬಡವರ ಬಾಳನ್ನು ಅತ್ಯಂತ ದುಸ್ತರಗೊಳಿಸಿದೆ ಎಂದು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಹೇಳಿದರು.
ತಾಲೂಕಿನ ಸೋಸಲೆ, ಬೆನಕಹಳ್ಳಿ, ಮುತ್ತಲವಾಡಿ, ಕೇತುಪುರ, ಉಕ್ಕಲಗೆರೆ ಮತ್ತು ಸೋಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡಿದರು. 2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತು. ಗ್ಯಾಸ್ ದರ ಏರಿಕೆ, ಅಡುಗೆ ಎಣ್ಣೆ, ಬೇಳೆ, ದಿನ ಬಳಕೆಯ ವಸ್ತುಗಳ ಬೆಲೆಯೇರಿಕೆ ಮಾಡಿ ಗ್ರಾಮೀಣ ಜನರ ಬದುಕನ್ನು ಹೆಚ್ಚು ಕಷ್ಟಕರ ಮಾಡಿದೆ ಎಂದು ಆರೋಪಿಸಿದರು.
ಸುಳ್ಳು ಭರವಸೆ ನೀಡುವುದು ಬಿಜೆಪಿಯ ಜಾಯಮಾನ. ಕೊಟ್ಟ ಯಾವ ಭರವಸೆಯನ್ನೂ ಈಡೇರಿಸಿಲ್ಲ.ಬುಲೆಟ್ ರೈಲು, ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿ, ಒಂದು ಕೋಟಿ ಉದ್ಯೋಗ ಸೃಷ್ಟಿ, 15 ಲಕ್ಷ ರೂ. ಸೇರಿದಂತೆ ಕೊಟ್ಟ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸುವ ಇಚ್ಛಾಶಕ್ತಿ ಬಿಜೆಪಿಗೆ ಇಲ್ಲದಿರುವುದು ಜಗಜಾಹೀರಾಗಿದೆ ಎಂದರು.
ದುರ್ಬಲರು, ಮಹಿಳೆಯರು ಮತ್ತು ಆರ್ಥಿಕವಾಗಿ ಹಿಂದುಳಿದ ಜನರನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಇದರಿಂದ ಬಡವರ ಬದುಕು ಆರ್ಥಿಕವಾಗಿ ಚೇತರಿಕೆ ಕಾಣುತ್ತಿದೆ. ಹಾಗಾಗಿ, ಜನಪರ ಕಾಳಜಿಯುಳ್ಳ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ನನ್ನನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಜಿ. ಪಂ. ಮಾಜಿ ಸದಸ್ಯೆ ಸುಧಾಮಹದೇವಯ್ಯ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸ್ವಯಂಪ್ರೇರಿತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದು, ಕಾಂಗ್ರೆಸ್ ಗೆಲುವು ಶತಸ್ಸಿದ್ಧ. ಗೆಲುವಿನ ಅಂತರವನ್ನು ಹೆಚ್ಚಿಸಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತದಾರರಲ್ಲಿ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಯನ್ನು ಮನವರಿಕೆ ಮಾಡಿ ಮತ ಹಾಕಿಸಬೇಕು ಎಂದರು.
ಜಿ. ಪಂ. ಮಾಜಿ ಸದಸ್ಯ ತಲಕಾಡು ಮಂಜುನಾಥ್, ಲತಾಸಿದ್ಧಶೆಟ್ಟಿ, ಮೈಮುಲ್ ನಿರ್ದೇಶಕ ಚಲುವರಾಜ್, ಪುರಸಭಾ ಮಾಜಿ ಸದಸ್ಯ ಪದ್ಮನಾಭ, ಪಿಕಾರ್ಡ್ ಮಾಜಿ ಅಧ್ಯಕ್ಷ ವಜ್ರೇಗೌಡ, ಅನಿಲ್ ಬೋಸ್, ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಕೆಬ್ಬೆ ಶಿವಸ್ವಾಮಿ, ಸದಸ್ಯರಾದ ರಾಮಲಿಂಗಯ್ಯ, ಕೆಬ್ಬೆ ರಂಗಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನ್ನಕೇಶವ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪಾರ್ವತಮ್ಮ, ಸಿದ್ದನಹುಂಡಿ ಸುರೇಶ್, ಮಹದೇವ, ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಸಿದ್ದಪ್ಪ, ದೊಡ್ಡೇಬಾಗಿಲು ಗ್ರಾ ಪಂ. ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ನೆರೆಗ್ಯಾತನಹಳ್ಳಿ ಮಹದೇವಸ್ವಾಮಿ, ನಾಗಮ್ಮ, ಜಯಮಾಲಾ, ಷಡಕ್ಷರಿ, ಕುಮಾರ್, ರಾಜು ಇತರರು ಹಾಜರಿದ್ದರು.
ಬಾಕ್ಸ್ ಸುದ್ದಿ:
ಕಾಂಗ್ರೆಸ್ ಕಾರ್ಯಕರ್ತರೇ ಅಭ್ಯರ್ಥಿ :
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಅಭ್ಯರ್ಥಿ. ಪ್ರತಿಯೊಬ್ಬರೂ ತಾವೇ ಅಭ್ಯರ್ಥಿಗಳೆಂದು ಅರಿತು ಮತದಾನ ಮಾಡಬೇಕು. ದೇಶದ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ವನ್ನು ಅಧಿಕಾರಕ್ಕೆ ತರುವುದು ಅತ್ಯವಶ್ಯಕವಾಗಿದೆ.
-ಸುನೀಲ್ ಬೋಸ್
ಚಾಮರಾಜನಗರ ಮೀಸಲು ಲೋಕಸಭಾ ಅಭ್ಯರ್ಥಿ