ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ.ಮಹದೇವಪ್ಪ ಆರೋಪ
ನರಸೀಪುರದಲ್ಲಿ ಸಭೆ
ಪ್ರತಿನಿಧಿ ವರದಿ ತಿ.ನರಸೀಪುರ
ದೇಶದಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ಬಿಜೆಪಿ ಯಾವ ಬದಲಾವಣೆಯನ್ನು ಮಾಡಿಲ್ಲ. ಸುಳ್ಳು ಹೇಳುವುದೇ ಬಿಜೆಪಿಯ ದೊಡ್ಡ ಸಾಧನೆಯಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ.ಮಹದೇವಪ್ಪ ಆರೋಪಿಸಿದರು.
ಪಟ್ಟಣದ ಚಿಕ್ಕಮ್ಮತಾಯಿ ಯಾತ್ರಿ ಭವನದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಬಿಜೆಪಿಯು ಹಲವು ತಂತ್ರಗಾರಿಕೆಗಳ ಮುಖೇನ ಅಧಿಕಾರ ಹಿಡಿಯುತ್ತದೆ. ಬಿಜೆಪಿಗೆ ಅಧಿಕಾರ ಮಾತ್ರವೇ ಮುಖ್ಯ, ದೇಶ ಮತ್ತು ಜನರ ಅಭಿವೃದ್ಧಿ ಬಗ್ಗೆ ಆ ಪಕ್ಷಕ್ಕೆ ಕಾಳಜಿ ಇಲ್ಲ. ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಅವರಿಗೆ ಅಧಿಕಾರ ಮಾತ್ರಬೇಕು. ರೈತರು, ಬಡವ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಚಿಂತನೆ ಅವರಿಗಿಲ್ಲ ಎಂದು ದೂರಿದರು.
ಬಿಜೆಪಿ ರಾಜ್ಯ ಮತ್ತು ಕೇಂದ್ರದಲ್ಲಿ ವಾಮಮಾರ್ಗದ ಮುಖೇನ ಅಧಿಕಾರ ಹಿಡಿಯುತ್ತಿದೆ. ಜನಾದೇಶ ಇಲ್ಲದಿದ್ದರೂ ಹಲವು ರಾಜ್ಯಗಳಲ್ಲಿ ಸರ್ಕಾರಗಳನ್ನು ಬೀಳಿಸಿ ಅಧಿಕಾರಕ್ಕಾಗಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ. ಅಧಿಕಾರ ದಾಹದಿಂದ ಪ್ರಜಾಪ್ರಭುತ್ವದ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದೆ. ದೇಶದ ಐಕ್ಯತೆ, ಸಾಮರಸ್ಯ ಮತ್ತು ಜಾತ್ಯತೀತ ಉಳಿಯಬೇಕೆಂದರೆ ಮತೀಯವಾದ ಹೊಂದಿರುವ ಬಿಜೆಪಿ ಸೋಲಬೇಕು.ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕು ಎಂದರು.
ಚಾಮರಾಜನಗರ ಮತ್ತು ಮೈಸೂರು ಕೊಡುಗು ಕ್ಷೇತ್ರಗಳನ್ನು ರಾಜ್ಯದ ಜನತೆ ಗಮನಿಸುತ್ತಿದ್ದು, ಈ ಎರಡು ಕ್ಷೇತ್ರಗಳು ಮುಖ್ಯಮಂತ್ರಿ ಮತ್ತು ನನ್ನ ವ್ಯಾಪ್ತಿಗೆ ಸೇರಿದಂತಹ ಕ್ಷೇತ್ರಗಳು. ಹಾಗಾಗಿ ಈ ಎರಡು ಕ್ಷೇತ್ರಗಳನ್ನು ಶತಾಯಗತಾಯ ಗೆಲ್ಲಬೇಕು. ಇದು ನಮ್ಮಿಬ್ಬರ ಪ್ರತಿಷ್ಠೆಯ ಕಣಗಳಾಗಿವೆ. ಈ ಭಾಗದಲ್ಲಿ ಸಿದ್ದರಾಮಯ್ಯ ಮತ್ತು ನಾನು ವ್ಯಾಪಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಹಾಗಾಗಿ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದರು
ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ. ಭದ್ರಕೋಟೆಯನ್ನು ಕಾಯುವುದು ಎಲ್ಲ ಮತದಾರರ ಕರ್ತವ್ಯವಾಗಿದೆ. ನಿಮ್ಮ ಮನೆ ಮಗ ಸುನೀಲ್ ಬೋಸ್ ಅವರನ್ನು ಹೆಚ್ಚು ಅಂತರದ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದರು.
ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಹೊಸ ತಲೆಮಾರಿನ ನಾಯಕರಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಹೆಚ್ಚು ಯುವ ಪೀಳಿಗೆಗೆ ಹೆಚ್ಚು ಅವಕಾಶ ನೀಡಲಾಗಿದೆ. ಈ ಭಾಗದ ಜನತೆ ಸುನೀಲ್ ಬೋಸ್ ಅವರಿಗೆ ಹೆಚ್ಚು ಮುನ್ನೆಡೆ ನೀಡಿ ಅವರನ್ನು ಗೆಲ್ಲಿಸಬೇಕು ಎಂದರು.
ನಂಜನಗೂಡು ಉಪ ಚುನಾವಣೆ ಎದುರಾಗದ ಸುನೀಲ್ ಬೋಸ್ ಪರ ಅಲೆ ಎದ್ದಿತ್ತು. ಹಲವಾರು ಬಾರಿ ಅವಕಾಶ ವಂಚಿತರಾದ ಸುನೀಲ್ ಬೋಸ್ ಅವರಿಗೆ ಈ ಬಾರಿ ನಿರೀಕ್ಷೆ ಹುಸಿಯಾಗಿಲ್ಲ. ಅವರಿಗೆ ಟಿಕೆಟ್ ಸಿಕ್ಕಿದೆ. ಅವರನ್ನು ಗೆಲ್ಲಿಸಿಕೊಡುವ ಜವಾಬ್ದಾರಿ ಚಾಮರಾಜನಗರ ಕ್ಷೇತ್ರದ ಮತದಾರ ಕರ್ತವ್ಯ ಎಂದರು.
ಜಿ. ಪಂ. ಮಾಜಿ ಸದಸ್ಯರಾದ ಶಶಿಕಲಾ, ಮನೋನ್ಮಣಿ, , ತಲಕಾಡು ಮಂಜುನಾಥ್, ಡಾ. ಜ್ಞಾನ ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೂಗೂರು ಬಸವರಾಜು, ತಾ. ಪಂ. ಮಾಜಿ ಅಧ್ಯಕ್ಷ ಹ್ಯಾಕನೂರು ಉಮೇಶ್, ಹೊಸಪುರ ನವೀನ್, ಡಿಸಿಸಿ ಸದಸ್ಯ ಉಕ್ಕಲಗೆರೆ ಬಸವಣ್ಣ, ಎಸ್. ಸಿ /ಎಸ್ಟಿ ಗುತ್ತಿಗೆದಾರರ ಸಂಘದ ಜಿಲ್ಲಾ ಅಧ್ಯಕ್ಷ ಹೊಸಪುರ ಮಲ್ಲು , ಪುರಸಭೆ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ,ಮದನ್ ರಾಜ್, ಸದಸ್ಯ ಬಾದಾಮಿ ಮಂಜು, ತುಂಬಲ ಪ್ರಕಾಶ್, ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ಕೊತ್ತೆಗಾಲ ಬಸವರಾಜು,ತಾ. ಪಂ. ಮಾಜಿ ಉಪಾಧ್ಯಕ್ಷ ಬಿ.ಮರಯ್ಯ , ತಾ. ಪಂ. ಮಾಜಿ ಸದಸ್ಯರಾದ ಕುಕ್ಕೂರು ಗಣೇಶ್, ರಾಮಲಿಂಗಯ್ಯ, ರಾಘವೇಂದ್ರ, ವಾಟಾಳು ನಾಗೇಶ್, ಎ.ಜೆ. ವೆಂಕಟೇಶ್, ಸೋಸಲೆ ಪರಶಿವಮೂರ್ತಿ, ಕಾಂಗ್ರೆಸ್ ಮುಖಂಡ ಅಕ್ಕಿ ರಮೇಶ್, ಸಿ. ಮಹದೇವ ಇತರರು ಹಾಜರಿದ್ದರು.
ಬಾಕ್ಸ್ ಸುದ್ದಿಗಳು :
ಬಿಜೆಪಿಗೆ ಸಮಾನತೆ ಇಷ್ಟವಿಲ್ಲ: ಬಿಜೆಪಿ ದೇಶದ ಪ್ರತಿ ನಾಗರಿಕರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಸಮಾನತೆ ನೀಡಿರುವ ಸಂವಿಧಾನದ ಬದಲಾವಣೆಯ ಮಾತನಾಡುತ್ತಿದೆ. 400ಕ್ಕಿಂತ ಹೆಚ್ಚು ಸಂಸತ್ ಸ್ಥಾನಗಳನ್ನು ಗೆದ್ದರೆ ಸಂವಿಧಾನ ಬದಲಾವಣೆ ಮಾಡುವ ಅಪಾಯವಿದೆ. ಅನಂತಕುಮಾರ್ ಹೆಗಡೆ ಮತ್ತು ಬಿಜೆಪಿ ಅಭ್ಯರ್ಥಿಯೊಬ್ಬರು ಸಾರ್ವತ್ರಿಕ ಸಂವಿಧಾನ ಬದಲಾವಣೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.
-ಡಾ. ಎಚ್. ಸಿ ಮಹದೇವಪ್ಪ
ಉಸ್ತುವಾರಿ ಮತ್ತು ಸಮಾಜ ಕಲ್ಯಾಣ ಸಚಿವರು.
——————————–
ಟಿಕೆಟ್ ಹಂಚಿಕೆಗೂ ಮುನ್ನ ನಮ್ಮ ಪಕ್ಷದ ವರಿಷ್ಟರು ನನಗೆ ಫೋನ್ ಮಾಡಿ ಚಾಮರಾಜನಗರ ಕ್ಷೇತ್ರದ ಟಿಕೆಟ್ ಹಂಚಿಕೆ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಆ ವೇಳೆಯಲ್ಲಿ ನಾನು ಸುನೀಲ್ ಬೋಸ್ ಅವರ ಬಗ್ಗೆ ಧನಾತ್ಮಕ ವರದಿ ನೀಡಿದ್ದು, ಮಹದೇವಪ್ಪ ವರ್ಚಸ್ಸಲ್ಲದೆ ವೈಯುಕ್ತಿಕವಾಗಿ ಸುನೀಲ್ ಬೋಸ್ ಗೆಲ್ಲುವ ಅಭ್ಯರ್ಥಿ ಎಂದು ಮಾಹಿತಿ ನೀಡಿದ್ದೆ.
-ಡಾ.ಬಿ. ಜೆ. ವಿಜಯಕುಮಾರ್
ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ.
ಫೋಟೋ ಕ್ಯಾಪ್ಶನ್ :
ತಿ. ನರಸೀಪುರ ಪಟ್ಟಣದ ಚಿಕ್ಕಮ್ಮತಾಯಿ ಯಾತ್ರಿ ಭವನದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಮಾತನಾಡುತ್ತಿರುವುದು. ಮಾಜಿ ಜಿ. ಪಂ. ಸದಸ್ಯ ತಲಕಾಡು ಮಂಜುನಾಥ್, ಶಶಿಕಲಾ, ಮನೋನ್ಮಣಿ, ತಾ. ಪಂ. ಮಾಜಿ ಸದಸ್ಯರಾದ ಕುಕ್ಕೂರು ಗಣೇಶ್, ರಾಮಲಿಂಗಯ್ಯ ಇತರರು ಹಾಜರಿದ್ದರು.