ದಾವಣಗೆರೆ: ಧರ್ಮದ ಹೆಸರಲ್ಲಿ ರಾಜಕಾರಣ ಮಾಡುವ ಬಿಜೆಪಿಯಂಥ ಪಕ್ಷಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಮಾಜಿ ಶಾಸಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ದಾವಣಗೆರೆ ತಾಲ್ಲೂಕಿನ ರುದ್ರನಕಟ್ಟೆ ಗ್ರಾಮದಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಅವರು ಜಾತ್ಯಾತೀತತೆ ಭಾರತ ಸಂವಿಧಾನದ ಮೂಲ ತತ್ವವಾಗಿದೆ, ಆದರೆ ಬಿಜೆಪಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಹೊರಟಿರುವುದು ಅಪಾಯಕಾರಿ ಮತ್ತು ದೇಶದ ದುರಂತ ಎಂದು ಅವರು ಹೇಳಿದರು. ಧರ್ಮದ ಹೆಸರಲ್ಲಿ ದೇಶದಲ್ಲಿ ಆಡಳಿತ ನಡೆಸಿದರೆ ಸರ್ವಾಧಿಕಾರ ಧೋರಣೆ ತಲೆದೋರುತ್ತದೆ ಎಂದು ಹೇಳಿದ ಯತೀಂದ್ರ, ಭಾರತದ ನೆರೆರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲಿ ಏನಾಗಿದೆ ಅನ್ನೋದು ವಿಶ್ವಕ್ಕೆ ಗೊತ್ತಿದೆ ಎಂದರು. ಜಾತ್ಯಾತೀತ ತತ್ವ ಬಿಟ್ಟು ಆಡಳಿತ ನಡೆಸಿದರೆ ದೇಶದ ಅಭಿವೃದ್ಧಿಯಾಗದು, ಇತಿಹಾಸದಿಂದ ನಾವು ಪಾಠ ಕಲಿಯಬೇಕಿದೆ ಎಂದ ಯತೀಂದ್ರ ಸಿದ್ದರಾಮಯ್ಯ ಹೇಳಿದರು.