ಬೆಂಗಳೂರು: ಲೋಕಸಭೆ ಚುನಾವಣೆ ಕಣ ದಿನೇ ದಿನೆ ಕಾವೇರ್ತಿದೆ. ಎದುರಾಳಿಗಳ ಮಧ್ಯೆ ಮಾತಿನ ವಾಕ್ಸಮರವೇ ನಡೀತಿವೆ. ಇದರ ಮಧ್ಯೆ ಕೇಂದ್ರ ಸರ್ಕಾರದ 10 ವರ್ಷದ ಸಾಧನೆ ಬಗ್ಗೆ ಕಾಂಗ್ರೆಸ್ ದಿನ ಪತ್ರಿಕೆಗಳಲ್ಲಿ ಕೊಟ್ಟ ಚೊಂಬಿನ ಜಾಹೀರಾತು ಸದ್ಯ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಕಾಂಗ್ರೆಸ್ ಜಾಹೀರಾತಿಗೆ ಬಿಜೆಪಿ ಕೂಡ ತಿರುಗೇಟು ನೀಡಿದೆ. ಸಿಎಂ ಸಿದ್ದರಾಮಯ್ಯ ಫೋಟೋ ಹಂಚಿಕೊಂಡಿರುವ ಬಿಜೆಪಿ, ಒಂದು ಬದಿಯಲ್ಲಿ 2013ರಲ್ಲಿ ಚೊಂಬು ಹಿದಿದುಕೊಂಡು ಸಿದ್ದರಾಮಯ್ಯ ಬಯಲಿಗೆ ನಡೆದುಕೊಂಡು ಹೋಗುತ್ತಿದ್ದರೆ, ಮತ್ತೊಂದೆಡೆ 2023ರಲ್ಲಿ ಸ್ವಚ್ಛ್ ಭಾರತ್ ಮಿಷನ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಶೌಚಾಲಯ ಬಳಕೆ ಮಾಡುತ್ತಿರುವುದಾಗಿ ಹಂಚಿಕೊಳ್ಳುವ ಮೂಲಕ ವ್ಯತ್ಯಾಸ ಇಷ್ಟೇ ಎಂದು ಟಾಂಗ್ ನೀಡಿದೆ.
ಬಿಜೆಪಿ ಟ್ವೀಟ್
ಇನ್ನು ಕಾಂಗ್ರೆಸ್ನ ಚೊಂಬು ವಿಚಾರವಾಗಿ ಟ್ವೀಟ್ನಲ್ಲೇ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕಾಂಗ್ರೆಸ್ಸಿಗರೇ, ತಮಿಳುನಾಡಿಗೆ ನೀರು ಬಿಟ್ಟು ಕಾವೇರಿ ಮಾತೆಯ ‘ತುಂಬಿದ ಕೊಡ’ ಬರಿದು ಮಾಡಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟವರು ನೀವು. ಬೆಳೆ ಒಣಗಿಸಿ ರೈತರಿಗೆ ಚೊಂಬು ಕೊಟ್ಟವರು ನೀವು ಅಂತಾ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ನ ಚೊಂಬಾಸ್ತ್ರಕ್ಕೆ ತಿರುಗೇಟು ಕೊಟ್ಟಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಹೀಗಾಗಿ ಚೊಂಬು ಹಿಡಿದು ಭಿಕ್ಷೆ ಬೇಡ್ತಿದ್ದಾರೆ ಅಂತಾ ವಾಗ್ದಾಳಿ ನಡೆಸಿದರು. ಇದಕ್ಕೆ ತಿರುಗೇಟು ಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ, ಜೆಡಿಎಸ್ ಕಾರ್ಯಕರ್ತರಿಗೆ ಕುಮಾರಸ್ವಾಮಿ ಚೊಂಬು ಕೊಟ್ಟಿದ್ದಾರೆ ಅಂದಿದ್ದಾರೆ.