ರಾಮನಗರ : ಖಾಸಗಿ ಫೋಟೋ – ವಿಡಿಯೋಗಳನ್ನು ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಿರುವ ವೈದ್ಯನ ವಿರುದ್ಧ ಮಹಿಳೆಯೊಬ್ಬರು ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿನಾಯಕನಗರ ಬಡಾವಣೆ ವಾಸಿ ಪರಸಪ್ಪ ಖಾಸಗಿ ಫೋಟೋ – ವಿಡಿಯೋಗಳನ್ನು ಇಟ್ಟುಕೊಂಡು ತನ್ನನ್ನು ತೇಜೋವಧೆ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದು, ಆತನ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವಂತೆ ಮಹಿಳೆ ಕೋರಿದ್ದಾರೆ.
ಆ ಮಹಿಳೆ ವಾಸವಿದ್ದ ಮನೆಯ ಗ್ರೌಂಡ್ ಫ್ಲೋರ್ ಅನ್ನು ವೈದ್ಯ ಎಂದು ಹೇಳಿಕೊಂಡಿದ್ದ ಕೊಪ್ಪಳ ಮೂಲದ ಪರಸಪ್ಪ ಎಂಬುವನಿಗೆ ಬಾಡಿಗೆಗೆ ನೀಡಿದ್ದರು. ಅದೇ ಬಡಾವಣೆಯಲ್ಲಿ ಆತ ಕ್ಲಿನಿಕ್ ಇಟ್ಟುಕೊಂಡಿದ್ದನು. ಮಹಿಳೆಯ ಮನೆಯಲ್ಲಿ ಯಾರಾದರು ಅನಾರೋಗ್ಯಕ್ಕೆ ಒಳಗಾದರೆ ಆತನ ಬಳಿ ಚಿಕಿತ್ಸೆ ಪಡೆಯುತ್ತಿದ್ದರು.
ಮಹಿಳೆಯ ಕೈಯಲ್ಲಿ ಗಂಟು ಆಗಿದ್ದಾಗಲು ಆತನಿಂದಲೇ ಚಿಕಿತ್ಸೆ ಪಡೆದಾಗ ಇಬ್ಬರಲ್ಲಿ ಆತ್ಮೀಯತೆ ಬೆಳೆದಿದೆ. ಆಗಿನಿಂದ ವೈದ್ಯ ಮನೆಗೆ ಬಂದು ಹೋಗುತ್ತಿದ್ದನು. ಆ ವೈದ್ಯನೊಂದಿಗೆ ಅನ್ಯೋನ್ಯವಾಗಿರುವ ಹಾಗೂ ಖಾಸಗಿ ಫೋಟೋ, ವಿಡಿಯೋಗಳನ್ನು ತನ್ನ ಅರಿವಿಗೆ ಬಾರದಂತೆ ತೆಗೆದುಕೊಂಡಿದ್ದಾನೆ.
ಆ ಫೋಟೋ-ವಿಡಿಯೋಗಳನ್ನು ಮುಂದಿಟ್ಟುಕೊಂಡು ವೈದ್ಯ ಮಹಿಳೆಯಿಂದ ಹಣ, ಒಡವೆ ಪಡೆದಿದ್ದಾನೆ. ಹಣ ನೀಡದಿದ್ದಾಗ ವೈದ್ಯ ಕೆಲ ಖಾಸಗಿ ಫೋಟೋಗಳನ್ನು ಮಹಿಳೆಯ ಪತಿ ಮತ್ತು ಸಂಬಂಧಿಕರಿಗೆ ಕಳುಹಿಸಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಪೊಲೀಸರಿಗೆ ದೂರು ನೀಡಿದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.
ಈ ಸಂಬಂಧ ಕುಂಬಳಗೂಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿದ್ಯಾರ್ಥಿನಿಗೆ 1.74 ಲಕ್ಷ ರೂ.ವಂಚನೆ
ರಾಮನಗರ : ಪಾರ್ಟ್ ಟೈಮ್ ಜಾಬ್ ಆಸೆಗೆ ಬಿದ್ದು ವಿದ್ಯಾರ್ಥಿನಿಯೊಬ್ಬಳು 1.74 ಲಕ್ಷ ರುಪಾಯಿ ವಂಚನೆಗೊಳಗಾಗಿರುವ ಘಟನೆ ನಡೆದಿದೆ. ತಾಲೂಕಿನ ಕೈಲಾಂಚ ಹೋಬಳಿ ಶಂಬೇಗೌಡನದೊಡ್ಡಿ ಗ್ರಾಮದ ಎಸ್.ಪಿ.ಪೂರ್ಣಿಮಾ ಹಣ ಕಳೆದುಕೊಂಡವರು.
ಪೂರ್ಣಿಮಾ ರವರ ಮೊಬೈಲ್ ಗೆ ವಂಚಕರು ಕರೆ ಮಾಡಿ ಅಮೇಜನ್ ಮಲ್ಟಿ ನ್ಯಾಷನಲ್ ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ಪಾರ್ಟ್ ಟೈಮ್ ಜಾಬ್ ಇದೆ ಎಂದು ಹೇಳಿ ವಾಟ್ಸ್ ಆಪ್ ನಲ್ಲಿ ಲಿಂಕ್ ಕಳುಹಿಸಿದ್ದಾರೆ.
ಆ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ಅದರಲ್ಲಿ ಮೊಬೈಲ್ ನಂಬರ್ , ಲಾಗಿನ್ ಪಾಸ್ ವರ್ಡ್, ವಿತ್ ಡ್ರಾ ಪಾಸ್ ವರ್ಡ್ ಹಾಕಿದಾಗ ಪೇಜ್ ರಿಜಿಸ್ಟ್ರೇಷನ್ ಗೆಂದು ವಂಚಕರು ಹೇಳಿದ ಖಾತೆಗಳಿಗೆ ಹಣ ಸಂದಾಯ ಮಾಡಿದ್ದಾರೆ. ಒಟ್ಟು 1,74,720 ರುಪಾಯಿಗಳನ್ನು ಪೂರ್ಣಿಮಾ ಕಳೆದುಕೊಂಡಿದ್ದು, ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಡಿಯೋ ಹರಿಬಿಟ್ಟ ವ್ಯಕ್ತಿ ವಿರುದ್ಧ ಮಹಿಳೆಯಿಂದ ದೂರು
ರಾಮನಗರ : ಪತಿಯನ್ನು ಕೊಲೆ ಮಾಡುವುದಾಗಿ ಹೆದರಿಸಿ ಆತನ ಪತ್ನಿಯಾದ ತನ್ನೊಂದಿಗೆ ಬಲವಂತವಾಗಿ ವಿಡಿಯೋ ಮಾಡಿಕೊಂಡಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ವ್ಯಕ್ತಿ ವಿರುದ್ಧ ಮಹಿಳೆಯೊಬ್ಬರು ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಾಲೂಕಿನ ದೊಡ್ಡಮಣ್ಣುಗುಡ್ಡೆ ವಾಸಿ ರಾಜೇಶ್ ಎಂಬಾತನ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ.
14 ವರ್ಷಗಳ ಹಿಂದೆ ತಾನು ವಿವಾಹವಾಗಿದ್ದು, ಪತಿ, ಇಬ್ಬರು ಮಕ್ಕಳಿದ್ದಾರೆ. ನನ್ನನ್ನು ಬೆದರಿಸಿ ನೀನು ನನಗೆ ಸ್ಪಂದಿಸದಿದ್ದರೆ ನಿನ್ನ ಗಂಡನನ್ನು ಕೊಲೆ ಮಾಡಿ ಸಾಯಿಸುವುದಾಗಿ ಬೆದರಿಸಿ 2 ವರ್ಷಗಳಿಂದ ನನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಿ ವಿಡಿಯೋ ಮಾಡಿಕೊಂಡಿದ್ದಾನೆ. ಅಲ್ಲದೆ, ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.
ಇದರಿಂದ ನನಗೆ ಮತ್ತು ಪತಿ, ಮಕ್ಕಳ ಮರ್ಯಾದೆ ಹೋಗಿದ್ದು, ಕುಟುಂಬದವರಿಗೆ ಮಾನಸಿಕವಾಗಿ ನೋವುಂಟಾಗಿದೆ. ನೀನು ಕರೆದಾಗಲೆಲ್ಲ ಸ್ಪಂದಿಸದಿದ್ದರೆ ಉಳಿದ ವಿಡಿಯೋಗಳನ್ನು ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾನೆ.
ಈ ವಿಚಾರವಾಗಿ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದಾಗ ಆತನಿಂದ ಮುಚ್ಚಳಿಕೆ ಬರೆಸಿಕೊಂಡು ಬುದ್ಧಿ ಹೇಳಿ ಕಳುಹಿಸಿದ್ದರು. ಈಗ ಮತ್ತೆ ಪೀಡಿಸುತ್ತಿದ್ದು, ಆತನ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾಳೆ.