ಮಂಡ್ಯ: ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಜನ್ಮದಿನೋತ್ಸವದ ಅಂಗವಾಗಿ ನಗರದ ಕಾರಾಗೃಹ ವೃತ್ತದ ಅಪ್ಪು ಬಿರಿಯಾನಿ ಪಾರ್ಟಿ ಹಾಲ್ನಲ್ಲಿ ರಕ್ತದಾನ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳ ವಿತರಣೆಯಂತಹ ಜನಪರ ಕಾರ್ಯಕ್ರಮಗಳು ನಡೆದವು.
ಡಾ.ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಬಳಗ, ಜಿಲ್ಲಾ ರಕ್ತನಿಧಿ ಕೇಂದ್ರ, ಅಪ್ಪು ಬಿರಿಯಾನಿ ಸೆಂಟರ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಪ್ಪು ಭಾವ ಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ, ಅವರ ಸಾಧನೆಯ ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಪ್ಪು ಅಭಿಮಾನಿ ಬಳಗದ ಮುಖ್ಯಸ್ಥ ಕೆ.ಎಸ್.ಗುರುರಾಜ್ ಕಿರಗಂದೂರು, ಪ್ರತಿ ವರ್ಷವು ಪುನೀತ್ ರಾಜ್ಕುಮಾರ್ ಅವರ ಹೆಸರಿನಲ್ಲಿ ರಕ್ತದಾನ ಆರೋಗ್ಯ ಶಿಬಿರದಂತಹ ಜನಪಯೋಗಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು, ಇದನ್ನು ಹೀಗೆ ಮುಂದುವರಿಸುತ್ತೇವೆ ಎಂದರು.
ಅಪ್ಪು ಅಭಿಮಾನಿಗಳು ಅವರ ಮೇಲಿನ ಅಭಿಮಾನವನ್ನು ಸಮಾಜ ಸೇವೆ ಮಾಡುವುದರ ಮೂಲಕ ತೋರಿಸಬೇಕು. ಬಡಜನರಿಗೆ ಸಹಾಯ ಮಾಡಿ ಅಪ್ಪು ಅವರನ್ನು ನೆನದರೆ ಅದಕ್ಕೆ ಸಾರ್ಥಕತೆ ಬರುತ್ತದೆ ಎಂದು ಹೇಳಿದರು.
ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಪುನೀತ್ ರಾಜ್ಕುಮಾರ್ ಕನ್ನಡದ ಆಸ್ತಿ ಅವರ ಸಿನಿಮಾಗಳು ಸದಾಭಿರುಚಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ನಾಂದಿ ಹಾಡಿವೆ ಅವರ ಸಾಧನೆಯ ಬದುಕು ಸಮಾಜಮುಖಿಯಾಗಿದ್ದು, ಅಪ್ಪು ಅವರ ಜೀವನ ಸಾರ್ಥಕತೆಯನ್ನು ಕಂಡಿದೆ ಎಂದರು.
ಅಪ್ಪು ಅಭಿಮಾನಿ ಬಳಗದ ಪ್ರದೀಪ್, ಪ್ರಸನ್ನ, ನಿಶಾಂತ್, ಚಿರಂತ್, ತವನ್, ಶಿವರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ನಾಗರಾಜು, ಹಿಂದುಳಿದ ವರ್ಗಗಳ ಮುಖಂಡರಾದ ಯಲಿಯೂರು ಪ್ರದೀಪ್, ಸತೀಶ್ ಗುಡಿಗೇನಹಳ್ಳಿ ಭಾಗವಹಿಸಿದ್ದರು.
೧೮ಎಂಎನ್ಡಿ-೪
ಮಂಡ್ಯದ ಕಾರಾಗೃಹ ವೃತ್ತದ ಅಪ್ಪು ಬಿರಿಯಾನಿ ಪಾರ್ಟಿ ಹಾಲ್ನಲ್ಲಿ ರಕ್ತದಾನ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳ ವಿತರಣೆ ಕಾರ್ಯಕ್ರಮ ನಡೆಯಿತು.
ಶ್ರೀಗಂಧ ಬೆಳೆಗಾರರ ಸಮಾವೇಶ
ಮಂಡ್ಯ: ತಾಲ್ಲೂಕಿನ ಕಿರಗಂದೂರು ಗ್ರಾಮದ ಮಾದರಿ ರೈತ ಕೆ.ಪಿ. ಸಿದ್ದರಾಜು ಅವರ ತೋಟದಲ್ಲಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದಿಂದ ಶ್ರೀಗಂಧ ಬೆಳೆಗಾರರ ಸಮಾವೇಶ ಹಾಗೂ ಸಂವಾದ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ೮೦ ಕ್ಕೂ ಹೆಚ್ಚು ಶ್ರೀಗಂಧ ಬೆಳೆಗಾರರು ಹಾಗೂ ಆಸಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಹಸಿರು ಬೆಳೆಸುವ ಮೂಲಕ ಜಾಗತಿಕ ತಾಪಮಾನ ಕಡಿಮೆ ಮಾಡುವ ಹಾಗೂ ರೈತರಿಗೆ ಅವರ ಪರಿಸರ ಕಾಳಜಿಗೆ ಆರ್ಥಿಕ ಪ್ರೋತ್ಸಾಹ ನೀಡುವ ಕಾರ್ಯಕ್ರಮವಾದ `ಕಾರ್ಬನ್ ಕ್ರೆಡಿಟ್ ಯೋಜನೆ’ಯಿಂದ ರೈತರಿಗೆ ಸಿಗುವ ಲಾಭಗಳ ಬಗ್ಗೆ ಮಾಹಿತಿ ನೀಡಲಾಯಿತು.
ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಯು.ಶರಣಪ್ಪ, ಜಿಲ್ಲಾಧ್ಯಕ್ಷ ಹಂದಿ ನಾಗಣ್ಣ, ಕಾರ್ಯದರ್ಶಿ ಶ್ರೀಪಾದ ಆಚಾರ್ಯ, ಮದ್ದೂರು ತಾಲ್ಲೂಕು ಘಟಕದ ಕಾರ್ಯದರ್ಶಿ ಎಂ.ಕೆ. ದೇವರಾಜ್ ಭಾಗವಹಿಸಿದ್ದರು.
ಆರಿಗ್ರಾಫ್ ಸಂಸ್ಥೆಯ ಸುಬ್ಬು ಜೋಯಿಸ್ ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಕಾರ್ಬನ್ ಕ್ರೆಡಿಟ್ ಯೋಜನೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ವಿವರ ನೀಡಿದರು.
ಫೋಟೋ-೫
ಅಧಿಕಾರಿಗಳಿಂದ ಚೆಕ್ಪೋಸ್ಟ್ ಪರಿಶೀಲನೆ
ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ೨೫ ಚೆಕ್ಪೋಸ್ಟ್ಗಳನ್ನು ಸ್ಥಾಪನೆ ಮಾಡಲಾಗಿದ್ದು, ಜಿಲ್ಲಾಧಿಕಾರಿ ಡಾ.ಕುಮಾರ ಪರಿಶೀಲಿಸಿದರು.
ಮದ್ದೂರು ತಾಲ್ಲೂಕಿನ ಕೊಂಗಬೋರನದೊಡ್ಡಿ ಗೇಟ್ ಮತ್ತು ನಿಡಘಟ್ಟದ ಬಳಿ ಸ್ಥಾಪಿತವಾಗಿರುವ ಚೆಕ್ ಪೋಸ್ಟ್ಗಳಲ್ಲಿ ಸಿಬ್ಬಂದಿಗಳ ನಿಯೋಜನೆ, ಸಿ.ಸಿ. ಕ್ಯಾಮರಾ, ವಾಹನಗಳ ತಪಾಸಣೆ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಉಪಸ್ಥಿತರಿದ್ದರು.
೧೮ಎಂಎನ್ಡಿ-೩
ಮದ್ದೂರು ತಾಲ್ಲೂಕು ಕೊಂಗಬೋರನದೊಡ್ಡಿ ಗೇಟ್ ಮತ್ತು ನಿಡಘಟ್ಟ ಬಳಿ ಅಳವಡಿಸಲಾಗಿರುವ ಚೆಕ್ಪೋಸ್ಗಳನ್ನು ಅಧಿಕಾರಿಗಳು ಪರಿಶೀಲಿಸಿದರು.