ಪ್ರತಿನಿಧಿ ವರದಿ ಕೊಳ್ಳೇಗಾಲ
ತಾಲೂಕಿನ ಸತ್ತೇಗಾಲ ಗ್ರಾಮದ ಪರಿಶಿಷ್ಟಜಾತಿ ಬಡಾವಣೆಯಲ್ಲಿ ಬುಧವಾರ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮ ದೇವತೆ ಆದಿಶಕ್ತಿ ಮಾರಮ್ಮ ದೇವಿಯ ಹೂ, ಹೊಂಬಾಳೆ ಉತ್ಸವ ವಿಜೃಂಭಣೆಯಿಂದ ಜರುಗಿತು.
ಗ್ರಾಮದ ಕಾವೇರಿ ನದಿ ತಟದಿಂದ ಮುಂಜಾನೆ ಶ್ರೀ ಮಹದೇಶ್ವರಸ್ವಾಮಿ ಸತ್ತಿಗೆ, ಮಂಟೇಸ್ವಾಮಿ ಕಂಡಾಯ, ಚುಂಚನಗಿರಿ ತ್ರಿಶೂಲ, ಕಡೆಗದ್ದಪ್ಪನಪೆಟ್ಟಿ ಮತ್ತು ದಾಸರ ಕೊಂಡಕೋಲುಗಳನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿದ ಗ್ರಾಮಸ್ಥರು ಹೂ, ಹೊಂಬಾಳೆ ಉತ್ಸವವನ್ನು ಗ್ರಾಮದೊಳಕ್ಕೆ ಮಂಗಳವಾಧ್ಯ ಸಮೇತ ಮೆರವಣಿಗೆ ಮೂಲಕ ತಂದರು.
ನಂತರ ಉತ್ಸವ ಗ್ರಾಮದ ಮಧ್ಯ ಭಾಗದಲ್ಲಿರುವ ಶ್ರೀ ಮಾರಮ್ಮ ದೇವಸ್ಥಾನದ ಮೂಲಕ ಸಾಗಿ ಗ್ರಾಮದ ಅಂಬೇಡ್ಕರ್ ಬಡಾವಣೆಯ ಆರಂಭದಿಂದ ಶ್ರೀ ಮಹದೇಶ್ವರ ದೇವಸ್ಥಾನದ ಬೀದಿಯವರೆಗೆ ಮಧ್ಯಾಹ್ನದವರೆಗೆ ಸಾಗಿ ಅಂತ್ಯಗೊಂಡಿತು.
ಉತ್ಸವದ ಜವಾಬ್ದಾರಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಸತ್ಯಾದ್ರಿ ಯುವಕ ಸಂಘದ ಪದಾಧಿಕಾರಿಗಳು, ಹೂವು ಹೊಂಬಾಳೆ ಆಚರಣಾ ಸಮಿತಿ ವಹಿಸಿಕೊಂಡಿತ್ತು.
ಮಹಿಳೆಯರು ಬಣ್ಣ ಬಣ್ಣದ ರಂಗೋಲಿಗಳಿಂದ ಸಿಂಗರಿಸಿದ್ದರು. ಮುಖಂಡರು ಹಸಿರು ತಳಿರು ತೋರಣಗಳಿಂದ ಬೀದಿಗಳನ್ನು ಸಿಂಗಾರಗೊಳಿಸಿದ್ದರು. ಯುವಕರ ದಂಡು ಮಂಗಳವಾದ್ಯ ನಾದಕ್ಕೆ ವೀರ ಮಕ್ಕಳ ಕುಣಿತ ಹಾಕಿ ಕುಣಿದು ಕುಪ್ಪಳಿಸಿದರು.
10ಕೆಜಿಎಲ್-3
ಫೋಟೋ ಶೀರ್ಷಿಕೆ:
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಯುಗಾದಿ ಹಬ್ಬದ ಪ್ರಯುಕ್ತ ನಡೆದ ಹೂ, ಹೊಂಬಾಳೆ ಉತ್ಸವದಲ್ಲಿ ಅಪಾರ ಭಕ್ತ ಸಮೂಹ ನೆರೆದಿರುವುದು.
Leave a comment