ಪ್ರತಿನಿಧಿ ವರದಿ ಮದ್ದೂರು
ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಉಗ್ರ ನರಸಿಂಹಸ್ವಾಮಿಯ ಬ್ರಹ್ಮೋತ್ಸವ (ಬ್ರಹ್ಮ ರಥೋತ್ಸವ) ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.
ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯೊಳಗೆ ಸಲ್ಲುವ ಅಭಿಜಿನ್ ಲಗ್ನದಲ್ಲಿ ಯಥಾವಿಧಿಯಾಗಿ ಶ್ರೀ ನರ ಸಿಂಹಸ್ವಾಮಿ ದಿವ್ಯ ಬ್ರಹ್ಮ ರಥರೋಹಣಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಚಾಲನೆ ನೀಡಿದರು.
ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾಧಿಗಳು ಸುಡುವ ಬಿಸಿಲನ್ನು ಲೆಕ್ಕಿಸದೆ ಕೋಟೆ ಬೀದಿಯ ಪ್ರಮುಖ ಬೀದಿಗಳಲ್ಲಿ ದೇವರ ಪರ ಜಯಘೋಷಗಳನ್ನು ಕೂಗುತಾ ತೇರನ್ನು ಎಳೆಯುವ ಮೂಲಕ ದೇವರ ಕೃಪೆಗೆ ಒಳಗಾದರು. ರಥೋತ್ಸವ ವೇಳೆ ಹಣ್ಣು, ದವನವನ್ನು ದೇವರ ಮೇಲೆ ಎಸೆಯುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದರು.
ರಥೋತ್ಸವ ಅಂಗವಾಗಿ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುಲದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಉಗ್ರ ನರಸಿಂಹಸ್ವಾಮಿ ಬ್ರಹ್ಮರಥೋತ್ಸವದ ವೇಳೆ ಭಾಗವಹಿಸಿದ್ದ ಸಹಸ್ರಾರು ಭಕ್ತರಿಗೆ ವಿವಿಧ ಸಂಘ, ಸಂಸ್ಥೆಗಳ ವತಿಯಿಂದ ದೇಗುಲದ ಆವರಣದಲ್ಲಿ ಮಜ್ಜಿಗೆ, ಪಾನಕ, ಹೆಸರುಬೇಳೆ ಹಾಗೂ ಬಿಸಿಬೇಳೆ ಬಾತ್, ಮೊಸರನ್ನ, ಟಮೊಟೋಬಾತ್, ಪುಳಿಯೋಗರೆ, ಸಿಹಿ ಪೊಂಗಲ್ ನೀಡಲಾಯಿತು.
ಉತ್ತಮ ಮಳೆಯಾಗಿ ಬರಗಾಲ ದೂರವಾಗಲಿ
ಪ್ರತಿನಿಧಿ ವರದಿ ಮದ್ದೂರು
ಶ್ರೀ ಉಗ್ರ ನರಸಿಂಹಸ್ವಾಮಿ ದೇವರ ದಯೆಯಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಬಂದು ಬರಗಾಲ ಹೋಗಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
ಪಟ್ಟಣದ ಶ್ರೀ ಉಗ್ರನರಸಿಂಹಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಿಂದೆಂದು ಕಾಣದ ರೀತಿಯಲ್ಲಿ ಬರಗಾಲ ಬಂದ ಪರಿಣಾಮ ಕೆರೆ, ಕಟ್ಟೆಗಳು ಹಾಗೂ ಜಲ ಮೂಲಗಳಲ್ಲ ನೀರಿಲ್ಲದೆ ಬರಿದಾಗಿ ರೈತರಿಗೆ ಸಂಕಷ್ಟ ಉಂಟಾಗಿದೆ. ಶಿಂಷಾನದಿಯಲ್ಲಿ ನೀರು ಬತ್ತಿ ಹೋಗಿರುವುದನ್ನು ನೋಡಿದರೆ ಕಣ್ಣಿನಲ್ಲಿ ನೀರು ಬರುತ್ತದೆ. ಶ್ರೀ ಉಗ್ರ ನರಸಿಂಹಸ್ವಾಮಿ ದೇವರ ದಯೆಯಿಂದ ಶೀಘ್ರವಾಗಿ ಉತ್ತಮ ಮಳೆ ಬಂದು ಕೆರೆ, ಕಟ್ಟೆಗಳು ತುಂಬಬೇಕು ಮತ್ತು ಶಿಂಷಾ ನದಿಯಲ್ಲಿ ನೀರು ಉಕ್ಕಿ ಹರಿದು, ಹಸಿರಿನಿಂದ ಕಂಗೊಳಿಸುವಂತ್ತಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಲಿ ಎಂದು ಎಲ್ಲರೂ ದೇವರು ಪ್ರಾರ್ಥನೆ ಮಾಡೋಣ ಎಂದರು.
ಪಟ್ಟಣದ ಶ್ರೀ ಉಗ್ರ ನರಸಿಂಹ ಸ್ವಾಮಿಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಅಪಾರವಾದ ಭಕ್ತ ಸಮೂಹವನ್ನು ದೇವರು ಹೊಂದಿದೆ. ಜತೆಗೆ ದೇವರ ಬಗ್ಗೆ ಅಪರವಾದ ನಂಬಿಕೆಯಿದೆ. ಇಲ್ಲಿಯಾ ವಾಸ್ತು ಶಿಲ್ಪ ಕಲೆ ತುಂಬಾ ವಿಶೇಷವಾಗಿದೆ. ಶ್ರೀ ಉಗ್ರ ನರಸಿಂಹಸ್ವಾಮಿ ರಥೋತ್ಸವಕ್ಕೆ ಸಾವಿರಾರು ಭಕ್ತಾಧಿಗಳು ಬರಗಾಲದಲ್ಲಿ ಮತ್ತು ಸುಡುಬಿಸಿನಲ್ಲೂ ಆಗಮಿಸಿ ದೇವರ ಬಗ್ಗೆ ಭಕ್ತಿಭಾವ ಮೆರೆದಿದ್ದಾರೆ. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದರು.
ದೇಗುಲದ ಪ್ರಧಾನ ಅರ್ಚಕ ಟಿ.ನಾರಾಯಣ್ ಅಯ್ಯಂಗಾರ್, ಪಾರುಪತ್ತೇದಾರ್ ಕೆ.ಆರ್.ಮಂಜುನಾಥ್, ಉಪ ವಿಭಾಗಧಿಕಾರಿ ಬಿ.ಆರ್.ಮಹೇಶ್, ಉಪ ತಹಸೀಲ್ದಾರ್ ಸೋಮಶೇಖರ್, ಶಿರಸ್ತೆದಾರ್ ಲಕ್ಷ್ಮಿನರಸಿಂಹನ್, ರಾಜಸ್ವ ನಿರೀಕ್ಷಕ ಜಗದೀಶ್, ಪುರಸಭಾ ಮುಖ್ಯಾಧಿಕಾರಿ ಕರಿಬಸವಯ್ಯ ಇತರರು ಇದ್ದರು.
ಪೋಟೋ
ಮದ್ದೂರು ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಉಗ್ರ ನರಸಿಂಹಸ್ವಾಮಿಯ ಬ್ರಹ್ಮೋತ್ಸವ (ಬ್ರಹ್ಮ ರಥೋತ್ಸವ) ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.