ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ನಂಜುಂಡಯ್ಯ ಮಾಹಿತಿ
ವಿಶ್ವ ಸ್ತನ್ಯಪಾನ ಸಪ್ತಾಹ
ಪ್ರತಿನಿಧಿ ವರದಿ ಮಡಿಕೇರಿ
ಮಗು ಜನಿಸಿದ ಒಂದು ಗಂಟೆಯೊಳಗೆ ಎದೆಹಾಲುಣಿಸುವುದರಿಂದ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ನಂಜುಂಡಯ್ಯ ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಿಂದ ಜಿಲ್ಲಾಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ಮಾತನಾಡಿದರು.
ಸ್ತನ್ಯಪಾನವು ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜನರಲ್ಲಿ ಉಸಿರಾಟದ ತೊಂದರೆಯನ್ನು ಕಡಿಮೆ ಮಾಡುತ್ತದೆ. ಅಸ್ತಮಾ, ಆಹಾರ ಅಲರ್ಜಿ, ಮಧುಮೇಹ ಮತ್ತು ಅನೀಮಿಯಾ ಆಗುವ ಅಪಾಯಗಳು ಕಡಿಮೆ ಮಾಡುವ ಶಕ್ತಿ ಹೊಂದಿದೆ. ಪ್ರಸವದ ನಂತರ ಬರಬಹುದಾದ ಖಿನ್ನತೆ ಕಡಿಮೆಯಾಗುತ್ತದೆ. ಬಾಣಂತಿಯರು ಎದೆಹಾಲಿನ ಮಹತ್ವದ ಬಗ್ಗೆ ಅರಿತು ಮಗು ಜನಿಸಿದ ಒಂದು ಗಂಟೆಯೊಳಗೆ ಹಾಲುಣಿಸುವುದರಿಂದ ಮಗುವಿನ ಬೆಳವಣಿಗೆ ಮತ್ತು ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಆರ್ಸಿಎಚ್ ಅಧಿಕಾರಿ ಎ.ಆರ್. ಡಾ.ಮಧುಸೂಧನ್ ಮಾತನಾಡಿ, ಆ.7ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ಸ್ತನ್ಯಪಾನದ ಪ್ರಯೋಜನಗಳನ್ನು ಉತ್ತೇಜಿಸಲು ಮತ್ತು ಮಕ್ಕಳ ಬೆಳವಣಿಗೆಗೆ ಹೇಗೆ ಸಹಾಯ ಮಾಡುತ್ತದೆ ಎಂಬ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ್ ಮಾತನಾಡಿ, ದೇಶದಲ್ಲಿ ಎನ್.ಎಫ್.ಎಚ್.ಎಸ್ ವರದಿ ಪ್ರಕಾರ ಶೇ.52 ರಷ್ಟು ಮಕ್ಕಳು ಒಂದು ಗಂಟೆಯ ಒಳಗಿನ ಎದೆಹಾಲು ಸೇವನೆಯಿಂದ ವಂಚಿತರಾಗುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಎದೆಹಾಲು ಬಿಟ್ಟು ಇತರೆ ಬಾಟಲ್ ಹಾಲು ನೀಡುತ್ತಿರುವುದರಿಂದ ಮಕ್ಕಳಿಗೆ ಅಪೌಷ್ಠಿಕತೆ, ಸೋಂಕು ತಗಲುವ ಸಂಭವ ಹೆಚ್ಚಿದೆ. ಎದೆಹಾಲನ್ನು ಮಗು ಜನಿಸಿದ ಒಂದು ಗಂಟೆಯೊಳಗೆ ಪ್ರಾರಂಭಿಸಿ ಕನಿಷ್ಠ 6 ತಿಂಗಳವರೆಗೆ ನೀಡಬೇಕು ಹಾಗೂ ಗರಿಷ್ಟ 2 ರಿಂದ 3 ವರ್ಷಗಳವರೆಗೂ ನೀಡುವುದು ಉತ್ತಮ ಎಂದು ತಿಳಿಸಿದರು.
ಮೂಡನಂಬಿಕೆಗಳಿಂದ ಜೇನುತುಪ್ಪ, ಸಿಹಿನೀರು, ಇತರೆ ಆಹಾರವನ್ನು ಮಗುವಿಗೆ ನೀಡುವುದರಿಂದ ಶಿಶುಗಳಿಗೆ ಸೋಂಕು ತಗಲುವ ಸಂಭವ ಹೆಚ್ಚು. ಎದೆನಾಗರ ಇತರೆ ಕಾಯಿಲೆಗಳಿಗೆ ತಪ್ಪು ನಂಬಿಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ತಿಳಿಸಿದರು.
ಹಿರಿಯ ವೈದ್ಯಕೀಯ ತಜ್ಞ ಡಾ.ರವಿಚಂದ್ರ ಮಾತನಾಡಿ, ಪ್ರತೀ ಪ್ರಾಣಿಗಳು ತಮ್ಮ ಮಕ್ಕಳಿಗೆ ಹುಟ್ಟಿದ ಕೂಡಲೇ ಎದೆಹಾಲನ್ನು ನೀಡುತ್ತವೆ. ಈಗಿನ ತಾಯಂದಿರು ಮಗು ಜನಿಸಿದ ತಕ್ಷಣ ಎದೆಹಾಲು ನೀಡುವುದು ಕಡಿಮೆ. ತಾಯಿಯ ಎದೆಹಾಲು ಅಮೃತ. ಇದರಲ್ಲಿ ಮಗುವಿಗೆ ಅವಶ್ಯಕವಾದ ಪೋಷಕಾಂಶಗಳು, ರೋಗ ನಿರೋಧಕ ಶಕ್ತಿ ಇದ್ದು, ಮಗುವಿನ ಮೆದುಳಿನ ಬೆಳವಣಿಗೆಗೆ ಅತ್ಯಾವಶ್ಯಕ ಎಂದರು.
ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ದಿವ್ಯಾರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ, ವೈದ್ಯಕೀಯ ಅಧೀಕ್ಷಕ ಡಾ.ಸೋಮಶೇಖರ್ ಇದ್ದರು.
ಫೋಟೋ 4 ಎಂಡಿಕೆ 02 ;. ಜಿಲ್ಲಾಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಉದ್ಘಾಟನೆ.