ಬಿಎಸ್ಪಿ ರಾಜ್ಯಾದ್ಯಕ್ಷ ಮಾರಸಂದ್ರ ಮುನಿಯಪ್ಪ ಸ್ಪಷ್ಟನೆ
ಪ್ರತಿನಿಧಿ ವರದಿ ರಾಮನಗರ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಕಳೆದ 40 ವರ್ಷಗಳಿಂದ ಸುಳ್ಳು ಹೇಳುತ್ತಾ ಜನರಿಗೆ ಮೋಸ ಮಾಡುತ್ತಾ ಪ್ರಜಾಪ್ರಭುತ್ವದ ವಿರೋಧಿ ನೀತಿಯನ್ನು ಅನುಸರಿಸಿ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಇಂತಹವರಿಗೆ ಬಹುಜನ ಸಮಾಜ ಪಾರ್ಟಿ ಬೆಂಬಲ ನೀಡುವುದಿಲ್ಲ. ಅದೇ ರೀತಿ ಬಿಜೆಪಿ ಅಭ್ಯರ್ಥಿಗೂ ಸಹ ಬೆಂಬಲ ನೀಡುವುದಿಲ್ಲ ಎಂದು ಬಿಎಸ್ಪಿ ರಾಜ್ಯಾದ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.
ಹಿಂದಿನಿಂದಲೂ ಬಿಎಸ್ಪಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿದೆ. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ನಡೆಸಿರುವ ಅನ್ಯಾಯದ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪುಸ್ತಕ ರಚಿಸಿ ಬಿಡುಗಡೆ ಮಾಡಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಎಸ್ಪಿಗೆ ದ್ರೋಹ ಮಾಡಿ ಕಾಂಗ್ರೆಸ್ ಅಭ್ಯರ್ಥಿಯಿಂದ ಹಣದ ಆಮಿಷಕ್ಕೆ ಒಳಗಾಗಿ ನಾಮಪತ್ರವನ್ನು ವಾಪಸ್ಸು ಪಡೆದ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇದೇ ಮಾದರಿಯಲ್ಲಿ ಮೈಸೂರಿನಲ್ಲಿಯೂ ಪಕ್ಷದ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿದೆ. ಇದರ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷವಿದೆ ಎಂದರು.
ಲೋಕಸಭಾ ಚುನಾವಣೆ ಸಂಬಂಧ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರನ್ನು ರಾಮನಗರದ ಜಾನಪದ ಲೋಕದಲ್ಲಿ ಸಭೆ ನಡೆಸಲು ಆಹ್ವಾನಿಸಿದ್ದನು. ಸಭೆ ಆರಂಭವಾಗುವ 2 ಗಂಟೆಯ ಮೊದಲೇ ಚುನಾವಣಾಧಿಕಾರಿಗಳ ಬಳಿಗೆ ತೆರಳಿ ನಾಮಪತ್ರವನ್ನು ವಾಪಸ್ ಪಡೆದು, ಪಕ್ಷಕ್ಕೆ ದ್ರೋಹ ಮಾಡಿದ್ದಾನೆ. ಬಾಬಾಸಾಹೇಬ ಅಂಬೇಡ್ಕರ್, ಕಾಶ್ಮೀರಾಂಜೀಯವರ ಮತ್ತು ಅಕ್ಕ ಮಾಯಾವತಿ ಅವರ ಪವಿತ್ರವಾದ ಚಳವಳಿಗೆ ದ್ರೋಹ ಮಾಡಿದ್ದಾನೆ. ಇವರನ್ನು ರಾಜ್ಯ ಖಜಾಂಚಿ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟನೆ ಮಾಡಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಏಪ್ರಿಲ್ 8ರಂದು ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಹುಜನ ಸಮಾಜ ಪಕ್ಷದವರು ನಾಮಪತ್ರವನ್ನು ವಾಪಸ್ ಪಡೆದುಕೊಳ್ಳುವ ಮೂಲಕ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಸಂಪೂರ್ಣವಾಗಿ ಬೆಂಬಲ ಕೊಟ್ಟಿದ್ದಾರೆ ಎಂದು ಹೇಳಿದ್ದು, ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆ ಎಂದರು.
ಗೋಷ್ಠಿಯಲ್ಲಿ ಬಿಎಸ್ಪಿ ಮುಖಂಡರಾದ ಅನ್ನದಾನಪ್ಪ, ಎಂ.ನಾಗೇಶ್, ವಿ.ಸ್ವಾಮಿ, ವೆಂಕಟಾಚಲ, ಉಮೇಸ್, ಕೃಷ್ಣಪ್ಪ, ಗೌರಮ್ಮ, ಮಹದೇವರ್, ಕಿರಣ್, ಶ್ರೀನಿವಾಸರಾವ್, ಮುರುಗೇಶ್ ಇದ್ದರು.