ಪ್ರತಿನಿಧಿ ವರದಿ ಆಲೂರು
ಸುಖ ದುಃಖದಲ್ಲಿ ಒಂದಾಗಿ ಸಹಕರಿಸುವಾತನೆ ನಿಜವಾದ ಧರ್ಮಾತ್ಮ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಮಠಾಧೀಶರಾದ ಜಗದ್ಗುರು ಡಾ.ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.
ತಾಲ್ಲೂಕು ವೀರಶೈವ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀ ರಂಭಾಪುರಿ ಜಗದ್ಗುರುಗಳ ಪುರ ಪ್ರವೇಶ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಧರ್ಮ ಪಾಲನೆಯಿಂದ ಆತ್ಮಶುದ್ಧಿ, ಧೈರ್ಯ ಮತ್ತು ಸಂಕಷ್ಟಗಳನ್ನು ಎದುರಿಸಲು ಆತ್ಮಬಲ ಪ್ರಾಪ್ತವಾಗುತ್ತದೆಯಲ್ಲದೆ, ಸಂಸ್ಕಂತಿ ಸಂವರ್ಧನೆಗೊಳ್ಳುತ್ತದೆ.
ಆತ್ಮವಿಶ್ವಾಸವನ್ನು ನೂರ್ಮಡಿಗೊಳಿಸಲು ಧರ್ಮಾಚರಣೆ ಮುಖ್ಯ. ಧರ್ಮ ಸಂಸ್ಕಂತಿ ಮತ್ತು ಪರಂಪರೆ ಮನುಷ್ಯನ ನಂಬಿಕೆಯನ್ನು ಅವಲಂಬಿಸಿದೆ. ನಂಬಿಕೆ ಇಲ್ಲದವರ ಮನಸ್ಸು ಶೂನ್ಯವಾಗಿರುತ್ತದೆ. ಕಣ್ಣು ಚೆನ್ನಾಗಿದ್ದರೆ ಜಗತ್ತು ಚೆನ್ನಾಗಿ ಕಾಣುತ್ತದೆ. ನಾಲಿಗೆ ಚೆನ್ನಾಗಿದ್ದರೆ ಜನತೆಗೆ ಚೆನ್ನಾಗಿ ಕಾಣುತ್ತೇವೆ. ವಿದ್ಯೆ, ದುಡಿಮೆ ಮತ್ತು ತಾಳ್ಮೆ ಜೀವನದ ಶ್ರೇಯಸ್ಸಿಗೆ ಅಡಿಪಾಯ. ವೀರಶೈವ ಧರ್ಮ ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸಿದೆ. ಸಕಲ ಜೀವಾತ್ಮರಿಗೆ ಸದಾ ಲೇಸನ್ನು ಬಯಸಿದ ವೀರಶೈವ ಧರ್ಮ ಬಹಳ ಪ್ರಾಚೀನವಾದುದು. ಇದಕ್ಕೊಂದು ಇತಿಹಾಸ ಭವ್ಯ ಪರಂಪರೆಯಿದೆ ಎಂದರು.
ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಆಗಸ್ತರಿಗೆ ಶಿವಾದೈತ ತತ್ವ ಸಿದ್ಧಾಂತವನ್ನು ಬೋಧಿಸಿ ಉದ್ಧರಿಸಿದ ಇತಿಹಾಸವಿದೆ. ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ವೀರಶೈವ ಧರ್ಮ ಅದ್ಭುತ ಕೊಡುಗೆಯನ್ನು ಕೊಟ್ಟಿದೆ. ವೈಚಾರಿಕತೆ ಮತ್ತು ಸುಧಾರಣೆಯ ನೆಪದಲ್ಲಿ ಧರ್ಮ ಸಂಸ್ಕøತಿಯ ಬಗೆಗೆ ನಿರ್ಲಕ್ಷ್ಯ ಮನೋಭಾವ ತಾಳುತ್ತಿರುವುದರಿಂದ ಜಗತ್ತಿನಲ್ಲಿ ಅಶಾಂತಿ, ಸಂಘರ್ಷ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ದ್ವೇಷ ಮರೆತು ಪ್ರೀತಿ ವಿಶ್ವಾಸ ಹೆಚ್ಚಿದಾಗ ಜಗದಲ್ಲಿ ಶಾಂತಿ ನೆಲೆಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಆರ್.ಗುರುದೇವ್ ಮಾತನಾಡಿ, ಜಗತ್ತಿನ ಶ್ರೇಯಸ್ಸಿಗೆ ಧರ್ಮಾಚರಣೆ ಮುಖ್ಯ ಧರ್ಮ ಪಾಲನೆ ಮಾಡದಿದ್ದರೆ ಆಘಾತ ತಪ್ಪಿದ್ದಲ್ಲ. ವೀರಶೈವ ಧರ್ಮದ ಪಂಚ ಪೀಠಗಳು ಯಾವಾಗಲೂ ಧರ್ಮ ಸಂಸ್ಕೃತಿಯ ಸಂವರ್ಧನೆಗಾಗಿ ಸದಾ ಶ್ರಮಿಸುತ್ತಿವೆ. ಶ್ರೀ ರಂಭಾಪುರಿ ಜಗದ್ಗುರುಗಳ ದಿವ್ಯ ಸಂದೇಶ ನಮ್ಮೆಲ್ಲರ ಬದುಕಿಗೆ ದಿಕ್ಸೂಚಿಯಾಗಿದೆ ಎಂದು ಹೇಳಿದರು.
ಪಟ್ಟಣದ ಸಂಗಮೇಶ್ವರ ದೇವಸ್ಥಾನದಿಂದ ವೀರಶೈವ ಕಲ್ಯಾಣ ಮಂಟಪದವರೆಗೆ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ವೀರಗಾಸೆ, ಡೊಳ್ಳು ಕುಣಿತ, ಕುಂಬ ಕಳಸ, ವಾದ್ಯ ವೃಂದಗಳೊಂದಿಗೆ ನಡೆಯಿತು.
ಸಮಾರಂಭದಲ್ಲಿ ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಯಸಳೂರು ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಡೆನಂದಿಹಳ್ಳಿ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ, ಸಂಕಲಾಪುರ ಮಠದ ಧರ್ಮರಾಜೇಂದ್ರ ಸ್ವಾಮೀಜಿ ಪಾಲ್ಗೊಂಡು ಶುಭ ಹಾರೈಸಿದರು.
ಅ.ಭಾ.ವೀ.ಮ.ರಾಷ್ಟ್ರೀಯ ಕಾರ್ಯಕಾರಿಣಿ ಘಟಕದ ಸದಸ್ಯ ಸಿದ್ದೇಶ್, ಮಲೆನಾಡು ವೀರಶೈವ ಸಂಘದ ಅಧ್ಯಕ್ಷ ದೇವರಾಜು, ಮಾಜಿ ಶಾಸಕ ಹೆಚ್. ಕೆ. ಕುಮಾರಸ್ವಾಮಿ, ಬೇಲೂರು ಶಿವಕುಮಾರ ಸ್ವಾಮೀಜಿ ಸಮುದಾಯ ಭವನದ ಮಾಜಿ ಅಧ್ಯಕ್ಷ ಎಮ್.ಎಸ್.ಪರಮಶಿವಪ್ಪ, ತಾಲೂಕು ಅಧ್ಯಕ್ಷ ರೇಣುಕಾ ಪ್ರಸಾದ್, ಮಾಜಿ ಅಧ್ಯಕ್ಷ ಕೆ.ಎ.ಕೊಟ್ಟೂರಪ್ಪ, ಮಲೆನಾಡು ಅ.ಮಂಡಳಿ ಮಾಜಿ ಅಧ್ಯಕ್ಷ ಹೆಚ್.ಪಿ. ಮೋಹನ್, ಹೆಚ್.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಜಗದೀಶ್ ಕಬ್ಬಿನಹಳ್ಳಿ, ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆ. ಎಸ್ ಮಂಜೇಗೌಡ, ತಾಲೂಕು ವೀರಶೈವ ಸಮಾಜದ ನಿರ್ದೇಶಕರು, ಸದಸ್ಯರು ಮತ್ತು ಭಕ್ತರು ಭಾಗವಹಿಸಿದ್ದರು.