ರಾಮನಗರ: ತಾಲೂಕಿನ ಬಿಡದಿ ಹೋಬಳಿ ಬಾನಂದೂರು ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿದ್ದ ಬಾನಂದೂರು ಗ್ರಾಮದಿಂದ ಶ್ರೀ ಕ್ಷೇತ್ರ ಆದಿಚುಂಚನಗಿರಿಗೆ ನೇರ ಬಸ್ ಸೌಲಭ್ಯದ ಕನಸ್ಸು ಕೊನೆಗೂ ಈಡೇರುವ ಕಾಲ ಸನ್ನಿಹಿತವಾಗಿದೆ.
ಆದಿಚುಂಚನಗಿರಿ ಮಠದ 71ನೇ ಪೀಠಾಧ್ಯಕ್ಷರಾಗಿದ್ದ ಜಗದ್ಗುರು ಶ್ರೀ ಬಾಲಗಂಗಧರನಾಥ ಸ್ವಾಮೀಜಿ ಅವರ ಜನ್ಮಸ್ಥಳವಾದ ಬಾನಂದೂರಿನಿಂದ ಆದಿ ಚುಂಚನಗಿರಿಗೆ ಬಸ್ ಸೌಕರ್ಯವಿರಲಿಲ್ಲ, ಈ ಬಗ್ಗೆ ಸಾಕಷ್ಟು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಗ್ರಾಮದ ಮುಖಂಡರಾದ ಗಂಗಾಧರಯ್ಯ ಅವರು ಸಿ.ಎಂ.ಲಿಂಗಪ್ಪ ಅವರ ಮೂಲಕ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಸಾರಿಗೆ ಸಚಿವರು ತಕ್ಷಣದಿಂದಲೇ ಬಸ್ ಸಂಚಾರ ಆರಂಭಿಸುವಂತೆ ಸೂಚನೆ ನೀಡಿದ್ದರು. ಲೋಕಸಭಾ ಚುನಾವಣೆ ನೀತಿ ಸಂಹಿತೆ ಇದ್ದ ಕಾರಣ ಬಸ್ ಬಿಡಲು ವಿಳಂಬವಾಗಿತ್ತು.
ಇದೀಗ ಬಾನಂದೂರು ಗ್ರಾಮದಿಂದ ಆದಿಚುಂಚನಗಿರಿ ಮಾರ್ಗದಲ್ಲಿ ಬಸ್ ಓಡಿಸಲು ರಾಮನಗರ ವಿಭಾಗದ ಸಾರಿಗೆ ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದಾರೆ.
ಜೂ-14 ರ ಶುಕ್ರವಾರ ದಿಂದ ಬಾನಂದೂರು-ಆದಿಚುಂಚನಗಿರಿ ಮಾರ್ಗದಲ್ಲಿ ಹೊಸ ಬಸ್ ಸಂಚಾರ ಆರಂಭವಾಗಲಿದೆ. ಈ ಮಾರ್ಗದ ಬಸ್ ಬೆಳಿಗ್ಗೆ 8-15 ಕ್ಕೆ ಮರಳವಾಡಿ ಬಸ್ ನಿಲ್ದಾಣದಿಂದ ಹೊರಡಲಿದ್ದು, ಬೆಳ್ಳೂರು ಕ್ರಾಸ್ ಮೂಲಕ ಆದಿಚುಂಚನಗಿರಿಗೆ ಮಧ್ಯಾಹ್ನ 12-30ಕ್ಕೆ ತಲುಪಲಿದೆ.
ಮಧ್ಯಾಹ್ನ 1-30 ಕ್ಕೆ ಆದಿಚಂಚನಗಿರಿ ಬಿಟ್ಟು ವಾಪಸ್ ಅದೇ ಮಾರ್ಗದಲ್ಲಿ ರಾಮನಗರಕ್ಕೆ4-30ಕ್ಕೆ ಬರಲಿದ್ದು, ಬಾನಂದೂರು ಗ್ರಾಮಕ್ಕೆ 5-30 ರ ಸಮಯಕ್ಕೆ ಬರಲಿದ್ದು, ಹಾರೋಹಳ್ಳಿ, ಮರಳವಾಡಿ ಗೆ ವಾಪಸ್ಸು ಆಗಲಿದೆ.
Leave a comment