- ಪ್ರಾಂಶುಪಾಲ ಹುಲಿವಾನ ನಾಗರಾಜು ಅಭಿಮತ
ಪ್ರತಿನಿಧಿ ವರದಿ ಕೃಷ್ಣರಾಜಪೇಟೆ
ದೇಶದ ಅಭಿವೃದ್ಧಿ ನಿಂತಿರುವುದು ಇಂಧನ ಸಂಪತ್ತಿನ ಮೇಲೆ. ಪ್ರಾಕೃತಿಕ ಮೂಲದ ಇಂಧನ ಸಂಪತ್ತಿನ ಬಳಕೆಯ ಮೇಲೆ ನಾವು ಸದಾ ಎಚ್ಚರ ವಹಿಸಬೇಕೆಂದು ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ಪ್ರಾಂಶುಪಾಲ ಹುಲಿವಾನ ನಾಗರಾಜು ಕರೆ ನೀಡಿದರು.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತ ಮತ್ತು ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ ಸಂಸ್ತೆಯ ಸಹಯೋಗದಲ್ಲಿ ಪಟ್ಟಣದ ಪಾಲಿಟೆಕ್ನಿಕ್ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಇಂಧನ ಸಂರಕ್ಷಣೆ ಮತ್ತು ಇಂಧನ ಬಳಕೆಯ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾಗತಿಕ ತಾಪಮಾನ ನಿಯಂತ್ರಣ ನಮ್ಮೆಲ್ಲರ ಕರ್ತವ್ಯ. ಆದ ಕಾರಣ ನಾವು ಇಂಧನ ಬಳಕೆ ಮತ್ತು ಅದರ ಸಂರಕ್ಷಣೆಯ ಬಗ್ಗೆ ಅರಿವು ಹೊಂದಿರಬೇಕು. ಪ್ರಾಕೃತಿಕ ಇಂಧನ ಮೂಲದ ಲಭ್ಯತೆ ನಮ್ಮಲ್ಲಿ ಶೇ.೦೧ ರಷ್ಟಿದ್ದರೆ, ಜಾಗತಿಕ ತಾಪಮಾನ ಏರಿಕೆಗೆ ನಮ್ಮ ಕೊಡುಗೆ ಶೇ.೧೬ರಷ್ಟಿದೆ. ಆದ್ದರಿಂದ ನಾವು ಪ್ರಾಕೃತಿಕ ಇಂಧನವನ್ನು ವಿವೇಕಯುತವಾಗಿ ಬಳಕೆ ಮಾಡಬೇಕು. ಇಂಧನ ಉಳಿತಾಯ ಮಾಡಿದರೆ ನಾವು ನಮ್ಮ ಕರ್ತವ್ಯವನ್ನು ಪಾಲಿಸಿದಂತೆ. ಭೂಮಿಯೊಳಗಿನ ಖನಿಜ ಮೂಲದ ಬದಲು ನಾವು ಸೌರಶಕ್ತಿ, ಪವನ ಶಕ್ತಿ ಮೂಲದ ವಿದ್ಯುತ್ ಬಳಕೆಗೆ ಆದ್ಯತೆ ನೀಡಬೇಕು. ಇದರಿಂದ ಜಾಗತಿಕ ತಾಪಮಾನವನ್ನು ಕಡಿಮೆ ಮಾಡಬಹುದಲ್ಲದೆ, ನೈಸರ್ಗಿಕ ಖನಿಜ ಮೂಲಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ನೀಡಬಹುದಲ್ಲದೆ ಪರಿಸರ ಮಾಲಿನ್ಯವನ್ನು ತಪ್ಪಿಸಬಹುದು ಎಂದು ಮಾಹಿತಿ ನೀಡಿದರು.
ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥೆ ಹೇಮಲತಾ ಕಾರ್ಯಾಗಾರವನ್ನು ಉದ್ಘಾಟಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣ ತಿಲಕ್, ಯಾಂತ್ರಿಕ ವಿಭಾಗದ ಮುಖ್ಯಸ್ಥ ಎಂ.ಎನ್.ಲೋಕೇಶ್, ದೂರಸಂಪರ್ಕ ವಿಭಾಗದ ಮುಖ್ಯಸ್ಥ ಬಿ.ಕೆ.ಮಂಜಪ್ಪಗೌಡ, ಉಪನ್ಯಾಸಕ ಮಾಲಿಂಗೇಗೌಡ, ಸುರೇಖಾ ಇದ್ದರು.
ಚಿತ್ರ ಶೀರ್ಷಿಕೆ: ೧೯ ಕೆ.ಆರ್.ಪಿ ೦೧ ಕೆ.ಆರ್.ಪೇಟೆ ಪಟ್ಟಣದ ಪಾಲಿಟೆಕ್ನಿಕ್ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಇಂಧನ ಸಂರಕ್ಷಣೆ ಮತ್ತು ಇಂಧನ ಬಳಕೆಯ ಅರಿವು ಮೂಡಿಸುವ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು.