ಪ್ರತಿನಿಧಿ ವರದಿ ಮೈಸೂರು
ಜೆಡಿಎಸ್ ನಾಯಕರಿಗೆ ಚುನಾವಣಾ ಸಂದರ್ಭದಲ್ಲಿ ಮಾತ್ರವೇ ಕಾವೇರಿ ನೆನಪಾಗಲಿದ್ದು, ಎಚ್.ಡಿ. ದೇವೇಗೌಡ ಅವರೇ ಪ್ರಧಾನಿಯಾಗಿದ್ದ ವೇಳೆ ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ನೀಡಲಿಲ್ಲ ಎಂದು ಕಾಂಗ್ರೆಸ್ ವಕ್ತಾರ ಎಚ್.ಎ. ವೆಂಕಟೇಶ್ ಟೀಕಿಸಿದರು.
ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ನಾಯಕರು ದೇಶಕ್ಕಾಗಿ ಮೋದಿ, ಕಾವೇರಿಗಾಗಿ ಎಚ್.ಡಿ. ಕುಮಾರಸ್ವಾಮಿ ಎಂದು ಹೇಳಿರುವುದು ನಗೆಪಾಟಲಿನ ವಿಷಯವಾಗಿದೆ. ಈ ಹಿಂದೆ ಎಚ್.ಡಿ. ದೇವೇಗೌಡರೇ ಪ್ರಧಾನಿಯಾಗಿದ್ದ ವೇಳೆ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ಕಂಡು ಹಿಡಿಯಲಿಲ್ಲ. ಬದಲಿಗೆ ಚುನಾವಣೆ ವೇಳೆ ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ವಿವಾದವನ್ನು ಹಾಗೆಯೇ ಉಳಿಸಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಚುನಾವಣೆ ನಂತರವೂ ಮುಂದುವರಿಯಲಿದೆ ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ. ಆದರೆ ಅದು ಮೈತ್ರಿಯೋ ಅಥವಾ ವಿಲೀನವೋ ಎಂಬ ಅನುಮಾನ ಅವರ ಪಕ್ಷದವರಲ್ಲೇ ಇದೆ ಎಂದು ಲೇವಡಿ ಮಾಡಿದರು.
ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ತಮ್ಮಲ್ಲಿ ಹಣವಿಲ್ಲದ ಕಾರಣ ಈ ಬಾರಿಯ ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದಾರೆ. ಸಚಿವರ ಈ ಹೇಳಿಕೆ ಹಣ ಇರುವವರಿಗೆ ಬಿಜೆಪಿಯಲ್ಲಿ ಚುನಾವಣೆ ಸಾಧ್ಯ ಎಂಬಂತಾಗಿದೆ. ಅಥವಾ ತಾವು ಜನಪ್ರಿಯತೆ ಕಳೆದುಕೊಂಡಿದ್ದೇವೆ ಎಂಬ ಅರಿವು ಅವರಿಗೆ ಇದ್ದಂತಿದೆ. ಈ ಮೊದಲು ಬಿಜೆಪಿಯವರು ನಮ್ಮ ಐದು ಗ್ಯಾರೆಂಟಿಗಳನ್ನು ಟೀಕಿಸುತ್ತಿದ್ದು, ಬಿಜೆಪಿಯವರು ತಮ್ಮದನ್ನು ಮೋದಿ ಗ್ಯಾರೆಂಟಿ ಎಂದಿದ್ದಾರೆ. ಅಂದರೆ ಆ ಪಕ್ಷ ತಮ್ಮ ಪಕ್ಷದ ಗ್ಯಾರೆಂಟಿ ಎಂದು ಹೇಳಿಕೊಳ್ಳುವ ಧೈರ್ಯವಿಲ್ಲ ಎಂದು ಟೀಕಿಸಿದರು.
ಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್. ಮೂರ್ತಿ, ಬಿ.ಕೆ. ಪ್ರಕಾಶ್, ಶಿವನಾಗಪ್ಪ, ಲೋಕೇಶ್, ಗೋಪಿನಾಥ್, ಭಾಸ್ಕರ್ ಹಾಜರಿದ್ದರು.
=================