ಪ್ರತಿನಿಧಿ ವರದಿ ಹನೂರು
ಯಾವುದೇ ಅಹಿತಕರ ಘಟನೆ ಜರುಗದಂತೆ ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಹಬ್ಬವನ್ನು ಆಚರಿಸಬೇಕು ಎಂದು ಹನೂರು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶಶಿಕುಮಾರ್ ತಿಳಿಸಿದರು.
ಪಟ್ಟಣದಲ್ಲಿ ಠಾಣೆ ವತಿಯಿಂದ ಶುಕ್ರವಾರ ಕರೆಯಲಾಗಿದ್ದ ಬಕ್ರೀದ್ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜೂ.17ರಂದು ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಈದ್ಗಾ ಮೈದಾನಕ್ಕೆ ತೆರಳುವಾಗ ಶಾಂತಿಯುತವಾಗಿ ಸಾಗಬೇಕು. ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಸಮುದಾಯದವರು ಸೌಹಾರ್ದತೆಯಿಂದ ಹಬ್ಬವನ್ನು ಆಚರಣೆ ಮಾಡಬೇಕು ಎಂದರು.
ಇದಕ್ಕೆ ಸಮುದಾಯ ಮುಖಂಡರು ಸಮ್ಮತಿ ಸೂಚಿಸಿ, ಈ ಬಾರಿಯೂ ಶಾಂತಿಯುತ ಹಬ್ಬ ಮಾಡಲಾಗುವುದು. ನಿಮ್ಮ ಸಹಕಾರವು ಅಗತ್ಯವಾಗಿದೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷ ಜಸ್ಸಿಂಪಾಷಾ, ಮಸೀದಿ ಯಜಮಾನರಾದ ಇಸ್ಮೇಲ್, ಕಾರ್ಯದರ್ಶಿ ಸಮೀಉಲ್ಲಾ, ಸಬ್ಬೀರ್ ಅಹಮ್ಮದ್, ಮುಖಂಡ ಅಮೀನ್, ಮೊಖಬುಲ್ ಸಾಬ್, ಮುನ್ನಾ, ರಾಮತುಲ್ಲಾ, ಅಪ್ರೋಜ್ ಖಾನ್, ಮಂಗಲ ಮುನ್ನ, ಕೌಸರ್, ಚೋಟು ಪಾಲ್ಗೊಂಡಿದ್ದರು.