ಪ್ರತಿನಿಧಿ ವರದಿ ಚಾಮರಾಜನಗರ
ಜಿಲ್ಲಾದ್ಯಂತ ಮುಸ್ಲಿಂ ಸಮುದಾಯದವರು ಗುರುವಾರ ಈದ್ ಉಲ್ ಫಿತ್ರ್(ರಂಜಾನ್) ಅನ್ನು ಶ್ರದ್ಧಾ, ಭಕ್ತಿ, ಸಂಭ್ರಮದಿಂದ ಆಚರಿಸಿದರು.
ತ್ಯಾಗ, ಶಾಂತಿಯ ಸಂಕೇತದ ಹಬ್ಬವನ್ನು ತಿಂಗಳ ಕಾಲ ಉಪವಾಸ ವ್ರತ ಅಂತ್ಯಗೊಳಿಸುವ ಮೂಲಕ ಗುರುವಾರ ಭಕ್ತಿಯಿಂದ ರಂಜಾನ್ ಆಚರಿಸಿದರು.
ಬೆಳಗ್ಗೆ ನಗರದ ಸತ್ತಿ ರಸ್ತೆ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಬಾಗ ಇರುವ ಈದ್ಗಾ ಮೈದಾನವೂ ಸೇರಿದಂತೆ ಜಿಲ್ಲೆಯ ಗುಂಡ್ಲುಪೇಟೆ, ಹನೂರು, ಯಳಂದೂರಿನ ಈದ್ಗಾ ಮೈದಾನಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹೊಸ ಧಿರಿಸಿನೊಂದಿಗೆ ಹಬ್ಬ ಸ್ವಾಗತಿಸಿದ ಮಂದಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳು ವ ಮೂಲಕ ಹರ್ಷ ವ್ಯಕ್ತಪಡಿಸಿದರು.
ನಗರವೂ ಸೇರಿದಂತೆ ಕೆಲವೆಡೆ ಸಾಮೂಹಿಕ ಪ್ರಾರ್ಥನೆ ನಂತರ ಸಮುದಾಯದ ಎಲ್ಲರೂ ಒಟ್ಟುಗೂಡಿ ಮೆರವಣಿಗೆ ನಡೆಸಿದರು. ಸ್ಥಿತಿ ವಂತರು ತಮ್ಮ ಧರ್ಮದ ಬಡ ಮಂದಿಗೆ ಕೈಲಾದಷ್ಟು ದಾನ ಮಾಡಿದರಲ್ಲದೇ ಹಿರಿಯರಿಂದ ಆಶೀರ್ವಾದ ಪಡೆದರು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
11ಸಿಎಚ್ಎನ್.1:ಜಿಲ್ಲಾದ್ಯಂತ ಮುಸ್ಲಿಂ ಸಮುದಾಯದವರು ಗುರುವಾರ ಈದ್ ಉಲ್ ಫಿತ್ರ್(ರಂಜಾನ್) ಅನ್ನು ಶ್ರದ್ಧಾ, ಭಕ್ತಿ, ಸಂಭ್ರಮದಿಂದ ಆಚರಿಸಿದರು.