ಚಿಕ್ಕಬಳ್ಳಾಪುರ : ಹಿಂದು ಧರ್ಮದ ಪುನರುಜ್ಜೀವನ ಮಾಡುವಲ್ಲಿ ಶಂಕರಚಾರ್ಯರ ಪಾತ್ರ ಅಪಾರವಾದುದು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು.
ಮಂಗಳವಾರ ಜಿಲ್ಲಾಡಳಿತ ವತಿಯಿಂದ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಶ್ರೀ ಶಂಕರಚಾರ್ಯರ ಮತ್ತು ಭಗೀರಥ ಮಹರ್ಷಿಯವರ ಜಯಂತಿ ಕಾರ್ಯಕ್ರಮಕ್ಕೆ ಅವರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಶಂಕರಾಚಾರ್ಯರು ಭಕ್ತಿ ಮತ್ತು ಜಾನ್ಞ ಮಾರ್ಗಕ್ಕೆ ಹೆಚ್ಚು ಒತ್ತು ನೀಡಿದ್ದರು. ಸೌಂದರ್ಯ ಮತ್ತು ಯವ್ವನದ ಬಗ್ಗೆ ಹೆಚ್ಚು ಹೆಮ್ಮೆ ಪಡಬಾರದು ಎಂಬುದನ್ನು ಬೋಧಿಸಿದರು. ಜ್ಞಾನಕ್ಕಿಂತ ಮಿಗಿಲಾದದ್ದು ಜಗತ್ತಿನಲ್ಲಿ ಬೇರೊಂದಿಲ್ಲ. ಹಣಕ್ಕೆ ಹೆಚ್ಚು ಮಹತ್ವ ನೀಡಬಾರದು. ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿದ ಮೇಲೆ ಮಿಗಿಲಾದ ಸಂಪತ್ತನ್ನು ಅಗತ್ಯ ಇರುವವರಿಗೆ, ಅಶಕ್ತರಿಗೆ ದಾನ ಮಾಡಿ ನೆಮ್ಮದಿ ಜೀವನ ಕಟ್ಟಿಕೊಳ್ಳಿ ಎಂದು ಭೋದಿಸಿದ ಅವರು ಭಾರತದಾದ್ಯಂತ ಸಂಚರಿಸಿ ಹಿಂದೂ ಧರ್ಮವನ್ನು ಪ್ರಚಾರ ಮಾಡಿದರು. ದೇಶದ ನಾಲ್ಕು ಭಾಗಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಅತ್ಯಂತ ಕಡಿಮೆ ಜೀವಿತಾವಧಿಯಲ್ಲಿ ಹೆಚ್ಚು ಸಾಧನೆಗೈದರು. ಅವರು ಪ್ರಸ್ತುತ ದೇಹವನ್ನು ಮಾತ್ರ ತ್ಯಜಿಸಿದ್ದಾರೆ. ಆದರೆ ಅವರ ಸಾಧನೆಗಳು, ವಿಚಾರ ದಾರೆಗಳು, ಆದರ್ಶಗಳು ಭೂಮಿ ಇರುವವರೆಗೂ ಜನಮಾನಸದಲ್ಲಿ ಜೀವಂತವಾಗಿರುತ್ತವೆ. ಹಿಂದೂ ಧರ್ಮವು ಅವನತಿ ಹೊಂದುವ ಹಾದಿಯಲ್ಲಿದ್ದ ಸಂದರ್ಭದಲ್ಲಿ ಧರ್ಮ ಪುನರುಜ್ಜೀವನದಲ್ಲಿ ಪ್ರಮುಖಪಾತ್ರ ವಹಿಸಿ ಭಾರತೀಯ ಸಮಾಜ ಸುಧಾರಕರಾಗಿದ್ದಾರೆ. ಇಂತಹ ಮಹನೀಯರು ರಚನೆ ಮಾಡಿರುವ ಎಲ್ಲ ಕೃತಿಗಳು, ಸಾಹಿತ್ಯಗಳು ಕನ್ನಡ ಭಾಷೆಗೂ ಭಾಷಾಂತರಗೊಂಡರೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.
ಶಂಕರಚಾರ್ಯರು ಹಾಗೂ ಭಗೀರಥ ಮಹರ್ಷಿಗಳು ಸೇರಿದಂತೆ ಇನ್ನಿತರ ಮಹಾನ್ ಸಾಧಕರ ಆದರ್ಶಗಳನ್ನ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಹಳ ಭಕ್ತಿ ಪೂರ್ವಕವಾಗಿ ಹಾಗೂ ಅರ್ಥಪೂರ್ಣವಾಗಿ ಇರ್ವರ ಜಯಂತಿಗಳನ್ನು ಕನ್ನಡ ಸಂಸ್ಕ್ರತಿ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಡಳಿತ ಆಯೋಜಿಸಿದೆ. ಇದಕ್ಕೆ ಸಹಕಾರ ನೀಡಿದ ಸಮುದಾಯದ ಪ್ರತಿಯೊಬ್ಬರಿಗೂ ಅಭಿನಂಧನೆಗಳನ್ನು ತಿಳಿಸಿದರು.
ಈ ವೇಳೆ ಉಷಾ ವೇಣುಗೋಪಾಲ ಮಾತನಾಡಿ, ಆದಿ ಶಂಕರ ಎಂದರೆ ಶುಭದ ಸಂಕೇತವಾಗಿದೆ. ಶ್ರೀ ಶಂಕರಾಚಾರ್ಯರು 8ನೇ ವಯಸ್ಸಿಗೆ 4 ವೇದಗಳನ್ನು ಕಲಿತು 12ನೇ ವಯಸ್ಸಿಗೆ ಎಲ್ಲ ವಿದ್ಯೆ, ಶಾಸ್ತ್ರ ಪರಂಗತರಾದರು. 16ನೇ ವಯಸ್ಸಿನಲ್ಲಿ 58 ಗ್ರಂಥಗಳು, 72 ಸ್ತೋತ್ರಗಳು ಮತ್ತು ಭಾಷ್ಯಗಳನ್ನು ರಚಿಸಿದರು ಎಂದು ತಿಳಿಸಿದರು.
ಸಮುದಾಯದ ಮುಖಂಡ ವೆಂಕಟೇಶ್ ಅವರು ಮಹರ್ಷಿ ಭಗೀರಥರ ಜೀವನ ಸಾಧನೆ ಕುರಿತು ತಿಳಿಸಿಕೊಟ್ಟರು.
ಅಪರ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಎನ್. ಮನಿಷ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ್ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ ರೈ, ಸಮುದಾಯದ ಮುಖಂಡರಾದ ಮೊಕ್ಷ ಗುಡಂ ವೇಣು ಗೋಪಾಲ, ಜಯ ಪ್ರಕಾಶ, ದೇವಾಶಾಸ್ತ್ರಿ, ಅನುಪಮ ನಾಗಭೂಷಣ್, ಶ್ರೀನಾಥ್, ನಳಿನ, ವೇಂಕಟೇಶ್, ಕೃಷ್ಣಪ್ಪ, ಗಂಗಾಧರ ಉಪಸ್ಥಿತರಿದ್ದರು.