ಪ್ರತಿಷ್ಠಿತ ಮೈಮುಲ್ ಅಧ್ಯಕ್ಷ ಗಾದಿ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬಿದ್ದಿದೆ. ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಆರ್ ಚಲುವರಾಜ್ ಆಯ್ಕೆಯಾಗಿದ್ದಾರೆ.
ಸಚಿವ ಡಾ ಹೆಚ್ ಸಿ ಮಹದೇವಪ್ಪ ಬೆಂಬಲಿಗ ಚಲುವರಾಜ್ ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ಮೈಮುಲ್ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ, ನನ್ನ ಆಯ್ಕೆಗೆ ಕಾರಣರಾದ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಾ ಹೆಚ್ ಸಿ ಮಹದೇವಪ್ಪ, ಕೆ ವೆಂಕಟೇಶ್, ಡಾ ಯತೀಂದ್ರ ಸಿದ್ದರಾಮಯ್ಯ, ಸುನಿಲ್ ಬೋಸ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದಿದ್ದಾರೆ.
ಹಾಗೇ ಮೈಮುಲ್ ನಲ್ಲಿ ಚುನಾವಣೆ ಮಾಡುವುದು ಬೇಡ ಎಂದೇಳಿ ಅವಿರೋಧವಾಗಿ ಆಯ್ಕೆಯಾಗಲಿ ಎಂದು ಶಾಸಕರಾದ ಜಿ ಟಿ ದೇವೇಗೌಡ, ಹರೀಶ್ ಗೌಡ ಕೂಡ ಸಹಕಾರವನ್ನ ನೀಡಿದ್ದು, ಇಬ್ಬರಿಗೂ ಧನ್ಯವಾದ ತಿಳಿಸುತ್ತೇನೆ. ಮೈಮುಲ್ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.