ಚಾಮುಂಡೇಶ್ವರಿ ಬೆಟ್ಟ ಪ್ರಾಧಿಕಾರ ವಿಚಾರಕ್ಕೆ ಕೋರ್ಟ್ ಮೆಟ್ಟಿಲೇರಿರುವ ರಾಜಮಾತೆ ಪ್ರಮೋದಾದೇವಿ ಒಡೆಯರ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಚಾಮುಂಡೇಶ್ವರಿ ಬೆಟ್ಟ ಪ್ರಾಧಿಕಾರದ ಹೆಸರಿನಲ್ಲಿ ರಾಜಮನೆತನದ ಅಧಿಕಾರವನ್ನ ಕಸಿಯಲು ಹೊರಟಿರುವ ಸರ್ಕಾರದ ನಡೆಯನ್ನ ಪ್ರಶ್ನಿಸಿರುವ ಪ್ರಮೋದಾದೇವಿ ಒಡೆಯರ್, ದೇವಸ್ಥಾನವನ್ನು ರಾಜ್ಯ ಸರ್ಕಾರ ಪ್ರಾಧಿಕಾರದ ಹೆಸರಿನಲ್ಲಿ ರೂಲಿಂಗ್ ಮಾಡೋಕೆ ಆಗೋದಿಲ್ಲಎಂದು ಕಿಡಿಕಾರಿದ್ದಾರೆ.
ಚಾಮುಂಡಿ ಬೆಟ್ಟದ ದೇವಸ್ಥಾನದಲ್ಲಿ ಸಮಸ್ಯೆ ಆದಾಗ ಮಾತ್ರವೇ ಸರ್ಕಾರ ಮಧ್ಯೆ ಪ್ರವೇಶಿಸಬಹುದು. ಬೆಟ್ಟ ಪ್ರಾಧಿಕಾರ ರಚನೆ ವಿಚಾರವಾಗಿ ಸರ್ಕಾರದ ಆಕ್ಟ್ ಅನ್ನು ನಾವು ಪ್ರಶ್ನೆ ಮಾಡಿದ್ದೇವೆ. 1953 ರಲ್ಲಿ ನಾವು ನಮ್ಮ ಖಾಸಗಿ ಆಸ್ತಿಯ ಲಿಸ್ಟ್ ಅನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದೇವೆ. ಅದರಲ್ಲಿ ಚಾಮುಂಡಿ ಬೆಟ್ಟವು ಕೂಡ ಸೇರಿದೆ. ಆದರೀಗ ರಾಜ್ಯ ಸರ್ಕಾರ ಚಾಮುಂಡೇಶ್ವರಿ ಬೆಟ್ಟ ಪ್ರಾಧಿಕಾರ ರಚನೆ ಮಾಡಲು ಹೊರಟಿದೆ. ಇದು ಕಾನೂನಾತ್ಮಕವಾಗಿಲ್ಲ ಅಂತ ಹೇಳಿ ನಾವುಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದೇವೆ ಎಂದು ತಿಳಿಸಿದ್ರು.
ಚಾಮುಂಡಿ ಬೆಟ್ಟದಲ್ಲಿ ರಾಜೇಂದ್ರ ವಿಲಾಸ ಅರಮನೆ, ಚಾಮುಂಡಿ ಬೆಟ್ಟ, ಅದರ ಆಸುಪಾಸಿನ ಜಾಗ, ಮಹಾ ಬಲೇಶ್ವರ, ಜ್ವಾಲಾಮುಖಿ ದೇವಸ್ಥಾನ, ದೇವಿಕೆರೆ, ನಂದಿ, 700 ಮೆಟ್ಟಿಲು, 3 ಪಂಪ್ ಹೌಸ್, ಲಲಿತಾದ್ರಿ ಸೇರಿದಂತೆ ಇನ್ನೂ ಅನೇಕ ಜಾಗಗಳು ನಮ್ಮ ಖಾಸಗಿ ಆಸ್ತಿಗಳು. ಸರ್ಕಾರ ದೇವಸ್ಥಾನಗಳನ್ನು ತೆಗೆದುಕೊಳ್ಳೋಕೆ ನೋಡ್ತಿದೆ. ಆದರೆ 2001ರಲ್ಲಿಯೇ ರಿಟ್ ಹಾಕಿದ್ದೇವೆ, ಅದು ಇನ್ನೂ ಹೈಕೋರ್ಟ್ನಲ್ಲಿರುವಾಗಲೇ ಸರ್ಕರ ಪ್ರಾಧಿಕಾರ ತಂದಿದೆ,ಅದು ತಪ್ಪು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನೂ ಮುಡಾ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನ ಹೇಳದೆ ಅವರ ವಿರುದ್ದ ಪರೋಕ್ಷವಾಗಿ ಕಿಡಿಕಾರಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಕೆಲವರು ಲ್ಯಾಂಡ್ ಕಳೆದುಕೊಂಡೆ ಅಂತ ಲ್ಯಾಂಡ್ ಕೇಳ್ತಾರೆ, ಹಾಗಾದರೆ ನಾವು ಕಳೆದುಕೊಂಡದ್ದು ಲ್ಯಾಂಡ್ ಅಲ್ಲವೇ? ನಮಗೂ ಲ್ಯಾಂಡ್ ಟು ಲ್ಯಾಂಡ್ ಕೊಡಬೇಕು ಅಲ್ಲವೇ? ಅಂತ ಖಾರವಾಗಿ ಪ್ರಶ್ನಿಸಿದ್ದಾರೆ. ಈ ಸರ್ಕಾರ, ಆ ಸರ್ಕಾರ ಅಂತೇನಿಲ್ಲ. ಎಲ್ಲಾ ಸರ್ಕಾರಗಳು ಕೂಡ ನಮಗೆ ತೊಂದರೆ ಕೊಡ್ತಾನೆ ಇದೇ ಅಂತ ಪ್ರಮೋದಾ ದೇವಿ ಒಡೆಯರ್ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಸರ್ವೇ ನಂಬರ್ 4 ಕುರುಬರಹಳ್ಳಿ, ಸಿದ್ದಾರ್ಥ್ ಲೇಔಟ್, ವಿಜಯಶ್ರೀಪುರ ಬಡಾವಣೆಗಳೆಲ್ಲವೂ ಕೂಡ ನಮ್ಮದೇ ಭೂಮಿ. ಮುಡಾ ನಮ್ಮ ಹೆಸರಿನಲ್ಲಿರುವ ಹಲವು ಎಕರೆ ಭೂಮಿಯನ್ನು ವಶ ಪಡಿಸಿಕೊಂಡಿದೆ. ಅದು 1 ಎಕರೆ, 100 ಎಕರೆ ಅಥವಾ ಎಕರೆ 1000 ಆಗಿರಬಹುದು. ನಮಗೂ ಕೂಡ ಸರ್ಕಾರ ಪರಿಹಾರವನ್ನ ಕೊಡಬೇಕಲ್ಲವೇ? ಅಂತ ಪರೋಕ್ಷವಾಗಿ ಭೂಮಿಗೆ ಭೂಮಿಗೆ ನೀಡಿ ಎಂದು ಸಿದ್ದರಾಮಯ್ಯಗೆ ಪ್ರಮೋದಾ ದೇವಿ ಒಡೆಯರ್ ಟಾಂಗ್ ಕೊಟ್ರು.
ನಮ್ಮ ಯಜಮಾನರು 4 ಬಾರಿ ಎಂಪಿ ಆಗಿದ್ರು. ಅವ್ರು ಒಂದು ಬಾರಿಯೂ ಅಧಿಕಾರಿಗಳನ್ನು ಕರೆದು ನನ್ನ ಜಾಗ ನಮಗೆ ಕೊಡಿ ಎಂದು ಕೇಳಿಲ್ಲ. ಯಾವ ಜಾಗವನ್ನು ನಾವು ಮಾಡಿಕೊಂಡಿಲ್ಲ. ಈಗ ನನ್ನ ಮಗ ಎಂಪಿ ಆಗಿದ್ದಾರೆ. ಅವ್ರು ಜನರ ಸೇವೆ ಮಾಡಲು ಸಂಸದರಾಗಿದ್ದಾರೆ. ನಾನು ಅವರನ್ನು ಕೂಡ ಈ ಬಗ್ಗೆ ಕೇಳಲ್ಲ. ನಾನು ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇನೆ. ನಮ್ಮ ಆಸ್ತಿ ವಿವಾದವನ್ನು ನಾವು ಕಾನೂನು ಮೂಲಕವೇ ಬಗೆ ಹರಿಸಿಕೊಳ್ಳುತ್ತೇವೆ ಅಂತ ಪ್ರಮೋದಾ ದೇವಿ ಒಡೆಯರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.