ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್ ನಲ್ಲಿ ಅಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಸರ್ಕಾರದ 5ನೇ ಗ್ಯಾರಂಟಿ-ಯುವನಿಧಿ ಯೋಜನೆಗೆ ಅದ್ದೂರಿ ಚಾಲನೆ ಸಿಕ್ಕಿತು. ಚುನಾವಣೆ ಸಮಯದಲ್ಲಿ 5 ಗ್ಯಾರಂಟಿಗಳನ್ನು ನೀಡಿದ್ದ ಕಾಂಗ್ರೆಸ್ ಇದುವರೆಗೆ ನಾಲ್ಕನ್ನು ಜಾರಿಗೊಳಿಸಿತ್ತು ಮತ್ತು ಇವತ್ತು ಕೊನೆಯ ಗ್ಯಾರಂಟಿಗೆ ಚಾಲನೆ ನೀಡಿ ಸರ್ಕಾರದ ಪ್ರತಿನಿಧಿಗಳು ಗೆಲುವಿನ ನಗೆ ಬೀರಿದರು. ರಾಷ್ಟ್ರೀಯ ಯುವ ದಿನಾವಾಗಿರುವ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡುವ ಮೊದಲು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸಹಸ್ರಾರು ಯುವಕರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಯುವನಿಧಿ ಯೋಜನೆಯ ಮೊಟ್ಟಮೊದಲ ಫಲಾನುಭವಿ ಚಿಕ್ಕಮಗಳೂರಿನ ಪುನೀತ್ ಬಿಎಸ್ ಆದರು. ಪುನೀತ್ ಜೊತೆ ಕುಮಾರ ಜೆವಿ, ದರ್ಶನ್, ಪುಷ್ಪಾ, ಪೂಜಾ ಎನ್, ಮೊಯ್ನುರ್ ಮುಲ್ಲಾ ಬೆನಕ ಕೆವಿ ಮೊದಲಾದವರಿಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಚೆಕ್ ಗಳನ್ನು ವಿತರಿಸಿ ಅಭಿನಂದಿಸಿದರು, ಸಚಿವರಾದ ಶರಣಪ್ರಕಾಶ್ ಪಾಟೀಲ್, ಮಧು ಬಂಗಾರಪ್ಪ, ಕೆಜೆ ಜಾರ್ಜ್, ನಾಗೇಂದ್ರ, ಮಂಕಾಳೆ ವೈದ್ಯ, ಶಾಸಕ ಬೇಳೂರು ಗೋಪಾಲಕೃಷ್ಣ ಅವರೊಂದಿಗೆ ಬಿಜೆಪಿ ಸಂಸದ ಬಿವೈ ರಾಘವೇಂದ್ರ ಮತ್ತು ಶಾಸಕ ಎಸ್ ಎನ್ ಚನ್ನಬಸಪ್ಪ ಹಾಜರಿದ್ದರು.