ಪ್ರತಿನಿಧಿ ವರದಿ ಹನಗೋಡು
ಶಾಲಾ-ಕಾಲೇಜುಗಳ ಹಂತದಲ್ಲೇ ವಿದ್ಯಾರ್ಥಿಗಳಿಗೆ ಸಾಮಾಜಿಕ ಪಿಡುಗುಗಳ ಬಗ್ಗೆ
ಕಾನೂನು ಅರಿವು ಮೂಡಿಸಬೇಕೆಂದು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎನ್.ಮುನಿಯಪ್ಪ ತಿಳಿಸಿದರು.
ಹನಗೋಡು ಹೋಬಳಿಯ ಚಿಲ್ಕುಂದ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಕಾನೂನು ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಹಾಗೂ ಬಾಲ್ಯ ವಿವಾಹಗಳಂತಹ ಸಾಮಾಜಿಕ ಪಿಡುಗುಗಳಿಗೆ ನಡೆಯುತ್ತಿವೆ. ಪಾಲಕರು ತಮ್ಮ ಬದುಕಿನ ಬವಣೆ ನೀಗಿಸಿಕೊಳ್ಳಲು ಚಿಕ್ಕ ಮಕ್ಕಳನ್ನು ಕೂಲಿ ಕೆಲಸಗಳಿಗೆ ಕಳುಹಿಸದೆ ಶಿಕ್ಷಣ ಕೊಡಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.
ಪೊಲೀಸ್ ಇಲಾಖೆಯಲ್ಲಿ ನಿರ್ವಹಿಸುವ ಕರ್ತವ್ಯ, ಬಾಲ ಕಾರ್ಮಿಕ ತಡೆ, ಎಫ್ಐಆರ್, ಬಾಲ್ಯ ವಿವಾಹ ಸೇರಿದಂತೆ ಮಕ್ಕಳ ಹಕ್ಕುಗಳು ಹಾಗೂ ಇಲಾಖೆ ಅಧಿಕಾರಿಗಳು ಬಳಸುವ ಪಿಸ್ತೂಲ್, ರೈಫಲ್, ಗಣಕಯಂತ್ರ, ಬಂದಿಖಾನೆ, ವಾಕಿಟಾಕಿ, ದಾಖಲಾತಿ ಸೇರಿದಂತೆ ಪೋಲಿಸ್ ಇಲಾಖೆಯು ನಿರ್ವಹಿಸುವ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ಡಿಎಲ್ ಇಲ್ಲದೆ ಚಾಲನೆ ಮಾಡಬೇಡಿ
ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು
ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನಗಳನ್ನು ಚಾಲನೆ ಮಾಡುವುದು ಕಾನೂನಿನ ಅಪರಾಧವಾಗಿದೆ. ಆದ್ದರಿಂದ ಪ್ರಾಪ್ತ ವಯಸ್ಸಿಗೆ ಬಂದ ನಂತರ ಡ್ರೈವಿಂಗ್ ಲೈಸನ್ಸ್ ಪಡೆದು ವಾಹನ ಚಾಲನೆ ಮಾಡಬೇಕೆಂದು ಸಲಹೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ಮಾಲತಿ ವಹಿಸಿದ್ದರು. ಪೋಲೀಸ್ ಸಿಬ್ಬಂದಿ ಮಹೇಶ್, ಮಂಜುನಾಥ್, ಸುಂದರರಾಜ್ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.