ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕರ್ನಾಟಕ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ನಿಲಯದ ಮಕ್ಕಳು ಪರದಾಡುವಂತಾಗಿದೆ. ಕಳೆದ 15 ದಿನಗಳಿಂದ ವಿದ್ಯಾರ್ಥಿನಿಯರು ಅರೆ ಹೊಟ್ಟೆಯಲ್ಲಿ ದಿನದೂಡುತ್ತಿದ್ದು, ನಮಗೆ ಹೊಟ್ಟೆ ತುಂಬ ಊಟ ಸಿಗುತ್ತಿಲ್ಲ ಎಂದು ವಸತಿ ನಿಲಯದ ವಿದ್ಯಾರ್ಥಿಗಳು ನೋವು ತೋಡಿಕೊಂಡಿದ್ದಾರೆ.
ಎಚ್ ಡಿ ಕೋಟೆ ತಾಲೂಕು ಕೇಂದ್ರದಲ್ಲಿನ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಯಾದ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಕೇಳೋರಿಲ್ಲ ವಿದ್ಯಾರ್ಥಿನಿಯರ ಗೋಳು. ಕಡಿಮೆ ದರಕ್ಕೆ ಟೆಂಡರ್ ದಾರರೊಬ್ಬರು ವಸತಿ ಶಾಲೆಯ ಟೆಂಡರ್ ಪಡೆದುಕೊಂಡಿದ್ದು, ಆ ದರದಲ್ಲಿ ನಿಲಯದ ವಿದ್ಯಾರ್ಥಿಗಳಿಗೆ ಆಹಾರ ಪೂರೈಸಲು ಸಾಧ್ಯವಾಗುತ್ತಿಲ್ಲ ಅಲ್ಲದೆ ನಾನು ಪಡೆದುಕೊಂಡಿದ್ದ ಟೆಂಡರ್ ಅವಧಿ ಪೂರ್ಣಗೊಂಡಿದ್ದು, ನನ್ನ ಟೆಂಡರ್ ರದ್ದುಗೊಳಿಸಲು ಪತ್ರ ಬರೆದಿದ್ದೇನೆ ನನಗೂ ನಿಲಯಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ. ಆದರೆ ವಸತಿ ನಿಲಯದಲ್ಲಿ ಟೆಂಡರ್ ದಾರರು ಕೊಡುವ ಆಹಾರ ಪದಾರ್ಥದಿಂದಷ್ಟೇ ನಾನು ವಿದ್ಯಾರ್ಥಿನಿಯರಿಗೆ ಆಹಾರ ತಯಾರಿಸಿ ಕೊಡಬೇಕು ಎಂದು ಮೇಲ್ವಿಚಾರಕಿ ಅಸಹಾಯಕ ಹೇಳಿಕೆ ನೀಡಿದ್ದಾರೆ.
ಅಧಿಕಾರಿಗಳು ಇತ್ತ ಗಮನ ಹರಿಸದ ಕಾರಣ ವಿದ್ಯಾರ್ಥಿನಿಯರು ಅರೆ ಹೊಟ್ಟೆಯಲ್ಲಿ ಪಾಠ ಕೇಳಬೇಕಾದ ಪರಿಸ್ಥಿತಿ ಎದುರಾಗಿ 15 ದಿನಗಳು ಕಳೆದಿದೆ. 65 ವಿದ್ಯಾರ್ಥಿಗಳ ಊಟಕ್ಕೆ ಕೊಡೋದು ಕೇವಲ ಐದುವರೆ ಕೆಜಿ ಸೊಸೈಟಿ ಅಕ್ಕಿ ಮಾತ್ರ. ವಿದ್ಯಾರ್ಥಿನಿಯರ ಟೀ ಗೆ ದಿನವೊಂದಕ್ಕೆ ಕೇವಲ 1 ಲೀಟರ್ ಹಾಲು ನೀಡಲಾಗುತ್ತಿದೆ. ಆಹಾರ ಪದಾರ್ಥಗಳಿಲ್ಲದ ಕಾರಣ ಸ್ನ್ಯಾಕ್ಸ್, ಕಾಫಿ, ಟೀ ಕೂಡ ಇಲ್ಲ. ಇವರು ಕೊಡುತ್ತಿರುವ ಅನ್ನ ಸಾಂಬರ್ ಹೊಟ್ಟೆ ತುಂಬುತ್ತಿಲ್ಲ ಎಂದಿದ್ದಾರೆ ವಸತಿ ನಿಲಯದ ವಿದ್ಯಾರ್ಥಿನಿಯರು. ವಸತಿನಿಲಯಗಳಲ್ಲಿರುವ ಸೌಲಭ್ಯಗಳನ್ನು ನಮಗೇಕೆ ನೀಡುತ್ತಿಲ್ಲ? ಊಟ ವಸತಿ ಸರಿಯಾದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದ ಇಂತಹ ಹಾಸ್ಟೆಲ್ ಗಳನ್ನು ಯಾಕೆ ಆರಂಭಿಸಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದ್ದು. ಅರೆ ಹೊಟ್ಟೆ ಊಟ ಮಾಡಿ ಶಿಕ್ಷಣ ಪಡೆಯುವುದಕ್ಕಿಂತ ನಾವು ನಮ್ಮ ನಮ್ಮ ಮನೆಗಳಿಗೆ ತೆರಳುತ್ತೇವೆ ಎಂದು ವಿದ್ಯಾರ್ಥಿನಿಯರು ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ.