ಪ್ರತಿನಿಧಿ ವರದಿ ಯಳಂದೂರು
ಸಾಮಾನ್ಯವಾಗಿ ವಿದ್ಯುತ್ ತಂತಿ ಹಾದು ಹೋಗಿರುವ ಮಾರ್ಗಗಳಲ್ಲಿ ತಂತಿಗೆ ತಾಗುವಂತೆ ಇರುವ ಮರಗಳ ಕೊಂಬೆಗಳನ್ನು ಕಡಿದು ಮಾರ್ಗವನ್ನು ಸುಗಮಗೊಳಿಸುವ ಕಾರ್ಯವನ್ನು ವಿದ್ಯುತ್ ಇಲಾಖೆ ಮಾಡುತ್ತದೆ. ಆದರೆ ಪಟ್ಟಣದ 1ನೇ ವಾರ್ಡ್ ನಲ್ಲಿರುವ ಸೊಪ್ಪಿನ ಕೇರಿ ಬಡಾವಣೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿರುವ ಅರಳಿ ಮರದ ಕೊಂಬೆಗಳು ವಿದ್ಯುತ್ ತಂತಿ ಹರಿಯುವ ಕಂಬದ ಲೈನ್ ಗಳಿಗೆ ತಾಗುತ್ತಿದ್ದು, ಅದರತ್ತ ವಿದ್ಯುತ್ ಇಲಾಖೆ ಅಧಿಕಾರಿಗಳು ಗಮನಹರಿಸಿಲ್ಲ ಎಂದು ವಾರ್ಡ್ ನ ಸ್ಥಳೀಯರು ದೂರಿದ್ದಾರೆ.
1ನೇ ವಾರ್ಡ್ ನ ಸೊಪ್ಪಿನಕೇರಿ ಬಡಾವಣೆಯಲ್ಲಿ 11 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿ ಹಾದು ಹೋಗಿದೆ, ಆದರೆ ರಸ್ತೆಯಲ್ಲಿರುವ ಅರಳಿ ಮರವು ಬೃಹತಾಕಾರವಾಗಿ ಬೆಳೆದಿದ್ದು, ಮೇಲಿನ ವಿದ್ಯುತ್ ತಂತಿಗೆ ತಾಗುತ್ತಿದೆ. ಅದೇ ಸ್ಥಳದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಶಾಲಾ ಮಕ್ಕಳು ಇದೇ ರಸ್ತೆಯ ಮೂಲಕ ಓಡಾಡುತ್ತಿದ್ದು, ಸಾರ್ವಜನಿಕರು ಸಹ ಅಪಾಯದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಯಾಕೋ ವಿದ್ಯುತ್ ಇಲಾಖೆಯ ಅಧಿಕಾರಿಗಳಾಗಲಿ ಸಿಬ್ಬಂದಿಗಳಾಗಲಿ ಇದರತ್ತ ತಿರುಗು ನೋಡದೆ ಮೌನಕ್ಕೆ ಶರಣಾಗಿದ್ದಾರೆ.
ಸದಾ ವಿದ್ಯುತ್ ಹರಿಯುವ ಈ ತಂತಿಗೆ ಎಲೆಗಳು ಇರುವ ಮರದ ಗೊಂಬೆಗಳು ತಾಗಿಕೊಂಡಿವೆ, ಅದನ್ನು ಆಶ್ರಯಿಸಿ ವಿದ್ಯುತ್ ತಂತಿಯನ್ನಿರಿ ಹಸಿರು ಬಳ್ಳಿಗಳು ಸುತ್ತಿಕೊಂಡು ಬೆಳೆದು ನಿಂತಿವೆ. ಒಂದು ವೇಳೆ ತಿಳಿಯದೆ ಈ ಮರವನ್ನು ಅಮಾಯಕರು ಯಾರಾದರೂ ಮುಟ್ಟಿದರೆ ಪ್ರಾಣ ಕಳೆದುಕೊಳ್ಳುವುದು ಗ್ಯಾರಂಟಿ. ಸಾರ್ವಜನಿಕ ಸ್ಥಳದಲ್ಲಿ ಪ್ರಾಣ ಬಲಿಗಾಗಿ ಕಾದಿರುವ ಈ ಅವ್ಯವಸ್ಥೆಯನ್ನು ಸರಿಪಡಿಸಲು ಚಸ್ಕಾಂ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ವಾರ್ಡ್ ನ ಮುಖಂಡ ರಘು ನಾಯಕ್ ಅವರು ಆರೋಪಿಸಿದ್ದಾರೆ.