ರಾಜಕಾರಣಿಗಳ ಚಿತ್ರವುಳ್ಳ ಪ್ರಚಾರದ ಫೋಟೊಗಳಿಗೆ ಬಣ್ಣ ಬಳಿದು ಮರೆ
ಪಾಂಡವಪುರ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿ ಆಗಿರುವುದರಿಂದ ಪಟ್ಟಣದ ಗೋಡೆಗಳ ಮೇಲಿರುವ ಸಿಎಂ, ಡಿಸಿಎಂ ಸೇರಿದಂತೆ ರಾಜಕಾರಣಿಗಳ ಚಿತ್ರವುಳ್ಳ ಪ್ರಚಾರದ ಫೋಟೊಗಳಿಗೆ ಬಣ್ಣ ಬಳಿದು, ಮುಚ್ಚಲಾಗುತ್ತಿದೆ.
ಚುನಾವಣಾ ಆಯೋಗದ ನಿಯಮಾನುಸಾರ ಪುರಸಭೆ ಸಿಬ್ಬಂದಿ ವರ್ಗದಿಂದ ಪಟ್ಟಣದಾದ್ಯಂತ ಸರ್ಕಾರದ ಯೋಜನೆಗಳ ಪ್ರಚಾರದಲ್ಲಿದ್ದ ಸಿ.ಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರವನ್ನು ಬಣ್ಣದಿಂದ ಬಳಿದು, ಚಿತ್ರ ಕಾಣದಂತೆ ಮುಚ್ಚಲಾಗಿದೆ.
ಪಟ್ಟಣದ ಐವತ್ತಕ್ಕೂ ಹೆಚ್ಚು ಗೋಡೆಗಳ ಮೇಲೆ ಸರ್ಕಾರದ ಪ್ರಚಾರ ಚಿತ್ರಿಸಲಾಗಿತ್ತು. ಎಲ್ಲ ಚಿತ್ರಗಳನ್ನು ಬಣ್ಣದಿಂದ ಮುಚ್ಚಿ, ಹೆಸರು ಕಾಣದಂತೆ ಬಳಿಯಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ, ಗೋಡೆಗಳು, ಖಾಸಗಿ ಹಾಗೂ ಸರ್ಕಾರಿ ಕಟ್ಟಡಗಳು, ದೊಡ್ಡ ಬೋರ್ಡ್ ಗಳಲ್ಲಿ ರಾಜಕಾರಣಿಗಳ ಚಿತ್ರಗಳುಳ್ಳ ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗಿದೆ.
ದೇವಸ್ಥಾನದ ಕಾಂಪೌಂಡ್, ಖಾಸಗಿ ಕಟ್ಟಡಗಳ ಗೋಡೆಗಳು ಸೇರಿದಂತೆ ಇತರೆ ಗೋಡೆಗಳ ಮೇಲೆ ಬಿಜೆಪಿ ಚಿಹ್ನೆ ಕಮಲ ಗುರುತು ಮೇಲೆ ಬಣ್ಣ ಬಳಿದು, ಮುಚ್ಚಲಾಗಿದೆ.
ಮೇಲುಕೋಟೆ ಕ್ಷೇತ್ರದ ಚುನಾವಣಾಧಿಕಾರಿ ಸೂಚನೆಯಂತೆ ಪುರಸಭೆ ಮುಖ್ಯಾಧಿಕಾರಿ ವೀಣಾ ನೇತೃತ್ವದಲ್ಲಿ ಸಿಬ್ಬಂದಿ ಚುನಾವಣೆ ನೀತಿ ಸಂಹಿತೆಯಂತೆ ಪ್ರಚಾರದ ಫ್ಲಕ್ಸ್ ಗಳನ್ನು ಕಿತ್ತೆಸೆದು, ಕಾನೂನು ಪಾಲಿಸಲಾಗಿದೆ.