ಮೈಸೂರು: ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ನಿನ್ನೆಯಷ್ಟೆ FIR ದಾಖಲಾಗಿದೆ. ಇಂದು ಮುಡಾ ಟೆನ್ಷನ್ ನಡುವೆಯೂ ಸಿಎಂ ಸಿದ್ದರಾಮಯ್ಯ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ನಂತರ ಕೃತಿ ಬಿಡುಗಡೆ ಮಾಡಿದ್ದಾರೆ. ಡಾ ಡಿ ಶ್ರೀನಿವಾಸ್ ಮಣಗಳ್ಳಿ ರಚಿಸಿರುವ ಸಂಪಾದನ ಕೃತಿಯನ್ನು ಇಂದು ಬಿಡುಗಡೆಗೊಳಿಸಲಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಂಬಂಧ ಬರೆದಿರುವ ಕೃತಿ ಇದಾಗಿದ್ದು, “ಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣ” ಶೀರ್ಷಿಕೆಯ ಪುಸ್ತಕ ಬಿಡುಗಡೆ ಮಾಡಲಾಗಿದೆ. ಕೃತಿ ಬಿಡುಗಡೆ ಬಳಿಕ ಸಂವಾದ ಕಾರ್ಯಕ್ರಮ ನಡೆದಿದ್ದು, ಸಿಎಂ ಕೂಡ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ನಾವು ಯುಗಾದಿ ಹಬ್ಬಕ್ಕೆ ಇಡ್ಲಿ, ದೋಸೆ ತಿನ್ನಬೇಕಿತ್ತು ಅಷ್ಟೇ. ನಮಗೆ ತಿಂಡಿ ಇರಲಿಲ್ಲ.ಬರೀ ಮುದ್ದೆ, ರೊಟ್ಟಿ ಅಷ್ಟೆ. ಆಗಾಗ ಮಾತ್ರ ಮನೆಯಲ್ಲಿ ಅನ್ನ ಮಾಡುತ್ತಿದ್ದರು.ನಮ್ಮ ಮನೆಯಲ್ಲಿ ಅನ್ನ ಮಾಡಿದಾಗ ಪಕ್ಕದ ಮನೆಯವರು ಕೇಳಿದರೆ ನಮ್ಮ ಅವ್ವ ಗೊಣಗುತ್ತಾ ಅವರಿಗೆ ಕೊಡುತ್ತಿದ್ದಳು. ಇದನ್ನು ನೋಡಿಯೆ ನಾನು ಎಲ್ಲರಿಗೂ ಅನ್ನ ಸಿಗಬೇಕು ಎಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದೆ ಎಂದು ಸಿಎಂ ಸಿದ್ದರಾಮಯ್ಯ ಭಾಷಣದ ವೇಳೆ ಬಾಲ್ಯದ ದಿನಗಳನ್ನು ನೆನೆದರು.
ಇನ್ನು ಇದೇ ವೇಳೆ ಸಿದ್ದರಾಮಯ್ಯ ನಾಯಕತ್ವಕ್ಕೆ ಗಂಡಾಂತರ ತರಲು ಪಟ್ಟಭಧ್ರ ಹಿತಾಸಕ್ತಿಗಳು ಹೊರಟಿವೆ. ಗ್ಯಾರಂಟಿ ಯೋಜನೆ ಫಲಾನುಭವಿಗಳು ಇದರ ವಿರುದ್ಧ ಹೋರಾಟಕ್ಕೆ ಇಳಿಯಬೇಕು ಎಂದು ಸಚಿವ ಡಾ ಎಚ್ ಸಿ ಮಹದೇವಪ್ಪ ಕರೆ ನೀಡಿದ್ದಾರೆ. ಸಿದ್ದರಾಮಯ್ಯ ಪರ ಯುವ ಚಳವಳಿ ಶುರುವಾಗಬೇಕಿದೆ. ಸಿದ್ದರಾಮಯ್ಯರನ್ನು ಅನುಮಾನ ಮಾಡಲು ಸಾಧ್ಯನಾ ? ಪಟ್ಟಭದ್ರ ಹಿತಾಸಕ್ತಿಗಳು ಒಂದಾಗಿ ಸಿದ್ದರಾಮಯ್ಯ ವಿರುದ್ದ ಈ ಸರಕಾರದ ವಿರುದ್ದ ಕೆಲಸ ಮಾಡುತ್ತಿವೆ. ಸಿದ್ದರಾಮಯ್ಯ ಅಪರೂಪದ ಪ್ರಾಮಾಣಿಕ ರಾಜಕಾರಣಿ. ಸಿದ್ದರಾಮಯ್ಯ ಗೆ ಖಾಸಗಿ ಜೀವನ ಇಲ್ಲ, ಮನೆ, ಮಠ, ಹೆಂಡತಿ, ಮಕ್ಕಳ ಬಗ್ಗೆ ಯೋಚನೆ ಮಾಡಲ್ಲ.
ಇಂತಹದೇ ಊಟ ಬೇಕು ಅಂತಾ ಕೂತವರು ಅಲ್ಲ. ಇಂತಹ ನಾಯಕರನ್ನು ಉಳಿಸಿ ಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಎಂಎಲ್ಸಿ ಡಾ ಡಿ ತಿಮ್ಮಯ್ಯ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಹೆಚ್ ಎಂ ರೇವಣ್ಣ, ಪುಷ್ಪ ಅಮರನಾಥ್ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಿದ್ದರು.