ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ‘ದೋಸ್ತಿ’ ನಾಯಕರ ಸಮರ ಜೋರಿದೆ. ಮುಡಾ & ವಾಲ್ಮೀಕಿ ನಿಗಮದ ಭ್ರಷ್ಟಾಚಾರ ವಿರುದ್ಧ ‘ಮೈತ್ರಿ’ ನಾಯಕರು ಪಾದಯಾತ್ರೆಗೆ ಮುಂದಾಗಿದ್ದಾರೆ. ಸಿಎಂ ಸಿದ್ದುಗೆ ಟಕ್ಕರ್ ಕೊಡೋಕೆ ಸರ್ವ ಪ್ರಯತ್ನ ನಡೆಸಲಾಗಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಕೂಡ ಅಲರ್ಟ್ ಆಗಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯಪಾಲರಿಂದ ಶೋಕಾಸ್ ನೋಟೀಸ್ ಜಾರಿ ಹಿನ್ನೆಲೆ ಮೈಸೂರಿನ ಸಿದ್ದು ಮನೆಯಲ್ಲಿ ರಾಜಕೀಯ ರಂಗೇರಿದೆ.
ಮೈಸೂರಿನ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಆಪ್ತ ಶಾಸಕರ ಜತೆ ಸಿಎಂ ದಿಢೀರ್ ಸಭೆ ನಡೆಸಿದ್ದು, ಈ ಭಾಗದ ಸಚಿವರು, ಶಾಸಕರ ಜೊತೆ ಮಹತ್ವದ ವಿಚಾರದ ಕುರಿತು ಚರ್ಚೆ ನಡೆಸಲಾಗಿದೆ. ಸಚಿವರಾದ ಡಾ ಹೆಚ್ ಸಿ ಮಹದೇವಪ್ಪ, ಕೆ ವೆಂಕಟೇಶ್ ಶಾಸಕರಾದ ರವಿಶಂಕರ್, ಹರೀಶಗೌಡ, ಅನಿಲ್ ಚಿಕ್ಕಮಾದು, ಎ ಆರ್ ಕೃಷ್ಣಮೂರ್ತಿ , ಶಾಸಕ ಪೊನ್ನಣ್ಣ ಸೇರಿದಂತೆ ಹಲವು ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದು, ಸಿಎಂ ಸಿದ್ದರಾಮಯ್ಯ ಈ ದಿಢೀರ್ ಸಭೆ ತೀವ್ರ ಕುತೂಹಲ ಕೆರಳಿಸಿದೆ. ಸಿದ್ದರಾಮಯ್ಯ ತಮ್ಮ ಮುಂದಿನ ರೂಪುರೇಷೆ ಹಾಗೂ ತಮ್ಮ ಬಣದ ಒಗ್ಗಟ್ಟನ್ನ ಹಿಡಿದಿಟ್ಟುಕೊಳ್ಳುವ ಸಲುವಾಗಿ ಈ ಸಭೆಯನ್ನ ನಡೆಸಿದ್ದಾರೆ ಎನ್ನಲಾಗಿದೆ. ಪ್ರಮುಖ ವಿಚಾರಗಳ ಕುರಿತು ಸಭೆಯಲ್ಲಿ ಗೌಪ್ಯ ಚರ್ಚೆ ನಡೆದಿದ್ದು, ಮುಂದಿನ ಹೋರಾಟದ ಕುರಿತು ಸುದೀರ್ಘ ಚರ್ಚೆ ನಡೆದಿದೆ ಎನ್ನಲಾಗಿದೆ.