ರಾಜ್ಯ ನಾಯಕರುಗಳ ಬಲ ಪ್ರದರ್ಶನದ ಸೂರಾಗಿದೆ ಮೈಸೂರು. ನಿನ್ನೆಯಷ್ಟೇ ಕಾಂಗ್ರೆಸ್ಸಿಗರು ಯಾವುದಕ್ಕೂ ನಾವು ಜಗ್ಗುವುದಿಲ್ಲ ಬಗ್ಗುವುದೂ ಇಲ್ಲವೆಂದು ಒಕ್ಕೊರಲಿನಿಂದ ಬಲ ಪ್ರದರ್ಶನವನ್ನು ಮಾಡಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಜನಾಂದೋಲನ ಸಮಾವೇಶವನ್ನು ಯಶಸ್ವಿಗೊಳಿಸಿದ ರಿಲ್ಯಾಕ್ಸ್ ಮೂಡಿನಲ್ಲಿದಾರೆ ಸಿಎಂ ಸಿದ್ದು.
ಇಂದು ಮೈಸೂರಿನ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ವಿರುದ್ಧದ ಆರೋಪಗಳನ್ನೂ ಎದುರಿಸಲು ನಾನು ಸನ್ನದ್ಧನಾಗಿದ್ದೇನೆ. ಬಿ.ವೈ.ವಿಜಯೇಂದ್ರ, ಯಡಿಯೂರಪ್ಪ , ಕುಮಾರಸ್ವಾಮಿ, ಆರ್. ಅಶೋಕ್ ಎಲ್ಲರೂ ಏನೇನೂ ಮಾಡಿದ್ದಾರೆ ಎಂಬುದು ಗೊತ್ತಿದೆ. ನಿನ್ನೆ ನಡೆದ ಸಮಾವೇಶದಲ್ಲಿ ಹಲವು ವಿಚಾರಗಳನ್ನ ಜನರ ಮುಂದೆ ಬಿಚ್ಚಿಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳನ್ನ ಜನರ ಮುಂದೆ ಇಡುತ್ತೇನೆ.ಈಗಾಗಲೇ ಕೆಲವನ್ನು ತನಿಖೆಗೂ ಕೊಟ್ಟಿದ್ದೇವೆ, ತನಿಖೆಯ ನಂತರ ಎಲ್ಲವನ್ನು ಜನರ ಮುಂದಿಡುತ್ತೇವೆ. ಹಾಗೆಯೇ ಬಿಜೆಪಿ- ಜೆಡಿಎಸ್ ನಾಯಕರ ಆರೋಪಗಳನ್ನು ರಾಜಕೀಯ ಹಾಗೂ ಕಾನೂನು ಮೂಲಕ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿದ ಸಿಎಂ ಸಿದ್ದರಾಮಯ್ಯ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆಯನ್ನ ಸಲ್ಲಿಸಿದ್ದಾರೆ. ಶ್ರಾವಣ ಶನಿವಾರ ಪ್ರಯುಕ್ತ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಸಿಎಂ ಬಹಳ ದಿನಗಳ ನಂತರ ದೇವಾಲಯಕ್ಕೆ ಅಪರೂಪಕ್ಕೆ ಭೇಟಿ ನೀಡುದ್ದಾರೆ. ಪಾರ್ಟಿಯ ಮುಖ್ಯಸ್ಥರು ಯಾರದರು ಬಂದಾಗ ಮತ್ತು ವಿಶೇಷ ಸಂಧರ್ಭದಲ್ಲಿ ಮಾತ್ರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಸಿಎಂ ಸಿದ್ದರಾಮಯ್ಯ ಇಂದು ದಿಢೀರನೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದೇವಾಲಯದ ಮುಖ್ಯದ್ವಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಪೂರ್ಣಕುಂಭ ಸ್ವಾಗತವನ್ನ ನೀಡಲಾಯಿತು.